ಟೆಹರಾನ್: ಭದ್ರತಾ ಮುಖ್ಯಸ್ಥ ಅಲಿ ಲಾರೀಜಾನಿ ಹತ್ಯೆಯನ್ನು ಇರಾನ್ ಖಚಿತಪಡಿಸಿದ್ದು, ಬುಧವಾರ ರಾಜಧಾನಿ ಟೆಹರಾನ್ನಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಇಸ್ರೇಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಇದರ ಬೆನ್ನಲ್ಲೇ, ಇರಾನ್ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಇಸ್ರೇಲ್ನ ವಾಣಿಜ್ಯ ನಗರಿ ಟೆಲ್ ಅವೀವ್ ಅನ್ನು ಗುರಿಯಾಗಿರಿಸಿ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಅಮೆರಿಕದ ಸೇನಾ ದಾಳಿಗಳನ್ನು ಗುರಿಯಾಗಿರಿಸಿಕೊಂಡು, ಕೊಲ್ಲಿ ರಾಷ್ಟ್ರಗಳ ಮೇಲೂ ಇರಾನ್ ರಾಕೆಟ್, ಡ್ರೋನ್ ದಾಳಿ ನಡೆಸಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ.
'ಲಾರೀಜಾನಿ ಹಾಗೂ ಅರೆಸೇನಾ ಪಡೆ ಬಸೀಜ್ನ ಕಮಾಂಡರ್ ಗುಲಾಮ್ ರೆಜಾ ಸುಲೈಮಾನಿ ಕೂಡ ಹತ್ಯೆಯಾಗಿದ್ದಾರೆ' ಎಂದು ಇರಾನ್ನ ಸುದ್ದಿಸಂಸ್ಥೆ 'ಫಾರ್ಸ್' ಹಾಗೂ 'ತಸ್ನೀಂ' ಸುದ್ದಿಸಂಸ್ಥೆ ಖಚಿತಪಡಿಸಿವೆ.
ಫೆಬ್ರುವರಿ 28ರಂದು ಅಮೆರಿಕ- ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇಸ್ರೇಲ್ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಖಮೇನಿ ಮೃತಪಟ್ಟಿದ್ದರು. ಇದಾದ ಬಳಿಕ ನಡೆದ ದಾಳಿಯಲ್ಲಿ ಇರಾನ್ ಕಳೆದುಕೊಂಡ ಸೇನೆಯ ಪ್ರಮುಖ ನಾಯಕರು ಇವರಾಗಿದ್ದಾರೆ.
'ಲಾರೀಜಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ನಿರ್ಣಾಯಕವಾಗಿ ಪ್ರತ್ಯುತ್ತರ ನೀಡಲಿದೆ' ಎಂದು ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ತಿಳಿಸಿದ್ದಾರೆ.
ರಾಷ್ಟ್ರೀಯ ಜಾಗೃತಿ: ಅಲಿ ಲಾರೀಜಾನಿ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ನ ಮಧ್ಯಭಾಗವನ್ನು ಗುರಿಯಾಗಿರಿಸಿಕೊಂಡು ಬುಧವಾರ ವ್ಯಾಪಕ ದಾಳಿ ನಡೆಸಲಾಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್(ಐಆರ್ಜಿಸಿ) ತಿಳಿಸಿದೆ.
'ಈ ಮಹಾನ್ ಹುತಾತ್ಮರ ಶುದ್ಧ ರಕ್ತವು ಜಾಗತಿಕ ದುರಂಹಕಾರದ ವಿರುದ್ಧ ಗೌರವ, ಶಕ್ತಿ ಹಾಗೂ ಜಾಗೃತಿಯ ಮೂಲವಾಗಿರುತ್ತದೆ' ಎಂದು ಸೇನೆಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇರಾನ್ ಮೇಲಿನ ದಾಳಿಯನ್ನು ಟರ್ಕಿ ಕೂಡ ಖಂಡಿಸಿದೆ. 'ರಾಜಕೀಯ ಹತ್ಯೆಗಳು ಸಾಮಾನ್ಯ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಕೈಗೊಂಡ ಕ್ರಮಗಳು' ಎಂದು ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರನ್ನು ಗುರಿಯಾಗಿಸಿ ದಾಳಿ ಮಾಡಲಾಗುವುದು ಇಸ್ರೇಲ್ ಘೋಷಿಸಿದೆ.
'ಮೊಜ್ತಬಾ ಖಮೇನಿ ಬಗ್ಗೆ ನಮಗೇನೂ ಗೊತ್ತಿಲ್ಲ, ನಾವು ಅವರನ್ನು ನೋಡಿಲ್ಲ. ಆದರೆ, ಅವರನ್ನು ಪತ್ತೆಹಚ್ಚಿ, ಅವರನ್ನು ಮುಗಿಸಲಾಗುವುದು' ಎಂದು ಇಸ್ರೇಲ್ನ ಸೇನಾ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ತಿಳಿಸಿದ್ದಾರೆ.
ಇಸ್ಮಾಯಿಲ್ ಖತೀಬ್
ಖತೀಬ್ ಹತ್ಯೆ- ಇಸ್ರೇಲ್ ಘೋಷಣೆ ಟೆಲ್ ಅವೀವ್: ಮಂಗಳವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರನ್ನು ಹತ್ಯೆ ಮಾಡಲಾಗಿದೆ ಇಸ್ರೇಲ್ನ ರಕ್ಷಣಾ ಸಚಿವ ಕಾಟ್ಜ್ ಹೇಳಿಕೊಂಡಿದ್ದಾರೆ. ಖತೀಬ್ ಸಾವಿನ ಕುರಿತಂತೆ ಇರಾನ್ನ ಇದುವರೆಗೂ ಖಚಿತಪಡಿಸಿಲ್ಲ. 'ಇರಾನ್ನ ಯಾವುದೇ ಹಿರಿಯ ಅಧಿಕಾರಿಯನ್ನು ಹತ್ಯೆ ಮಾಡಲು ನಾನು ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೇನೆಗೆ ಅಧಿಕಾರ ನೀಡಿದ್ದೇವೆ. ಇದಕ್ಕೆ ಹೆಚ್ಚುವರಿ ಅನುಮತಿಯನ್ನೂ ಪಡೆಯಬೇಕಿಲ್ಲ ಎಂದು ಸೂಚಿಸಲಾಗಿದೆ' ಎಂದು ಅವರು ಈ ವೇಳೆ ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆ ಬಿಸಿ? ಇಸ್ರೇಲ್ ಹಾಗೂ ಕೊಲ್ಲಿ ರಾಷ್ಟ್ರಗಳ ನಡುವೆ ಕ್ಷಿಪಣಿ ದಾಳಿಯ ಹೊರತಾಗಿಯೂ ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ಹೊರೆ ಹೊರಿಸಲು ಇರಾನ್ ಯತ್ನಿಸುತ್ತಿದೆ. ಕಚ್ಚಾತೈಲ ಸಾಗಣೆಗೆ ನಿರ್ಣಾಯಕವಾದ 'ಹೊರ್ಮುಜ್ ಜಲಸಂಧಿ' ಮುಚ್ಚುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ. 'ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ ₹100 ಡಾಲರ್ನಷ್ಟಿದ್ದು ಯುದ್ಧದಿಂದ ಜಾಗತಿಕ ಪರಿಣಾಮಗಳು ಈಗಷ್ಟೇ ಆರಂಭಗೊಂಡಿದ್ದು ಎಲ್ಲರ ಮೇಲೂ ಪರಿಣಾಮ ಬೀರಲಿದೆ' ಎಂದು ಇರಾನ್ನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್ ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ. ಈ ಜಲಸಂಧಿಯ ಮೂಲಕವೇ ವಿಶ್ವದ ಐದನೇ ಒಂದರಷ್ಟು ಕಚ್ಚಾತೈಲವನ್ನು ಸಾಗಣೆ ಮಾಡಲಾಗುತ್ತಿದೆ. ಅಮೆರಿಕದಿಂದ ದಾಳಿ: ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಇರಾನ್ನ ಕ್ಷಿಪಣಿ ಶಸ್ತ್ರಾಸ್ತ್ರ ಕೇಂದ್ರಗಳನ್ನು ನಾಶಗೊಳಿಸಲು ಅಮೆರಿಕವು ಭಾರೀ ಪ್ರಮಾಣದ ಬಾಂಬ್ಗಳ ಮೂಲಕ ದಾಳಿ ನಡೆಸಿದೆ. 'ಇರಾನ್ನ ಕ್ಷಿಪಣಿ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು 2.88 ಲಕ್ಷ ಡಾಲರ್ (₹2.66 ಕೋಟಿ) ಮೌಲ್ಯದ 5 ಸಾವಿರ ಪೌಂಡ್ ( 2 ಸಾವಿರ ಕೆ.ಜಿ) ತೂಕದ ಹಲವಾರು ಬಾಂಬ್ಗಳನ್ನು ಹಾಕಲಾಗಿದೆ' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

