ಪೆರ್ಲ: ಸವಿ ಹೃದಯದ ಕವಿಮಿತ್ರರು ವೇದಿಕೆಯ ವತಿಯಿಂದ ನಳಿನಿ ಐತ್ತಪ್ಪ ನಾಯ್ಕ ಪರಪ್ಪಕರ್ಯ ಅವರ ಪುತ್ರಿ ಕು.ಹರ್ಷಿತಾ ಪೆರ್ಲ ಅವರ ಚೊಚ್ಚಲ ಕವನ ಸಂಕಲನವಾದ ಚಿಗುರು ಎಂಬ ಕೃತಿ ಬಿಡುಗಡೆ ಪೆರ್ಲ ವ್ಯಾಪಾರಿ ಭವನದಲ್ಲಿ ನಡೆಯಿತು. ಬದಿಯಡ್ಕ ಶ್ರೀಭಾರತಿ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕವಿ ಮನಸ್ಸು ಬೆಳಕಿನಂತೆ ಪ್ರಖರ. ಬಾಲ್ಯ ಕಾಲದಲ್ಲಿ ಮೂಡಿದ ಆಸಕ್ತಿ ಅಭಿರುಚಿಗಳನ್ನು ಮುಂದುವರಿಸುತ್ತಾ ಹೋದರೆ ಮಾತ್ರ ಸಮಾಜದಲ್ಲಿ ಸಾಧಕನಾಗಲು ಸಾಧ್ಯ. ಬೆಳಕು ಬೆಳಗಿದಂತೆ ಸಮಾಜದಲ್ಲಿ ಸಾಹಿತ್ಯವನ್ನು ಬೆಳಗಿಸಲು ಸಾಧ್ಯವಾಗಬೇಕು. ಅದಕ್ಕೆ ಪ್ರೋತ್ಸಾಹದ ತೈಲ ಎರೆಯೋಣ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಚು.ಸಾ.ಪ.ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕವಿತ್ವವನ್ನು ಎಳೆಯದರಲ್ಲಿ ಗುರುತಿಸಿ ಪೋಷಿಸುತ್ತಿರುವುದು ಸ್ತುತ್ಯರ್ಹ ಸೇವೆ ಎಂದರು. ಹಿರಿಯ ಕವಿ. ಪತ್ರಕರ್ತರ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಹಾಗೂ ಲೇಖಕಿ ಪ್ರೇಮ ಆರ್ ಶೆಟ್ಟಿ ಮೂಲ್ಕಿ ಕೃತಿ ಪರಿಚಯಿಸಿದರು. ಶಿಕ್ಷಕ ಗಣೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಕ.ಸಾ.ಪ ಕಾಸರಗೋಡು ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ, ಹಿರಿಯ ಸಾಹಿತಿ ಹರೀಶ್ ಪೆರ್ಲ, ಚು.ಸಾ.ಪ ದಕ್ಷಿಣ ಕನ್ನಡ ಜಿಲ್ಲಾಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಹಿರಿಯ ಸಾಹಿತಿ, ವ್ಯಂಗಚಿತ್ರಕಾರ ವೆಂಕಟ ಭಟ್ ಎಡನೀರು, ಎಣ್ಮಕಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ, ಸಾಹಿತಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಪತ್ರಕರ್ತ ಜಯ ಮಣಿಯಂಪಾರೆ, ಕೃತಿಕರ್ತೃ ಹರ್ಷಿತಾ ಪೆರ್ಲ ಸಭೆಯಲ್ಲಿ ಉಪಸ್ಥಿತರಿದ್ದರು. ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕ ಮಾತನಾಡಿ ಸಹೃದಯರ ಮನಸ್ಪೂರ್ತಿಯ ಸಹಕಾರದಿಂದ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯವಾಗುತ್ತಿದ್ದು ಸಾಹಿತ್ಯವನ್ನು ಸಂಪನ್ನವಾಗಿರಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಪೃಥ್ವಿ ಕೆ. ಪ್ರಾರ್ಥನೆ ಹಾಡಿದರು. ಶಿಕ್ಷಕಿ ಜ್ಯೋತ್ಸ ಎಂ. ಸ್ವಾಗತಿಸಿ, ನಿವೃತ್ತ ಶಿಕ್ಷಕ ವಿಜಯ ಕಾನ ವಂದಿಸಿದರು. ಶಿಕ್ಷಕಿ ಪವಿತ್ರಾ ದಿನೇಶ್ ನಿರೂಪಿಸಿದರು.



