ಶ್ರೀನಗರ: ಚೈತ್ರ ನವರಾತ್ರಿಯ ಪ್ರಯುಕ್ತ ಜಮ್ಮುವಿನ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭಕ್ತರ ವಿಪರೀತ ದಟ್ಟಣೆಯಾಗಿದೆ.
ಇದರಿಂದ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದೇವಸ್ಥಾನದ ಮಂಡಳಿಯ ನಿರ್ಧಾರವನ್ನು ಜಿಲ್ಲಾಡಳಿತ ಘೋಷಿಸಿದೆ.
ದೇವಸ್ಥಾನಕ್ಕೆ ಭಕ್ತರ ಭೇಟಿ ವಿಪರೀತವಾಗಿ ಹೆಚ್ಚಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದೆ.
ಕತ್ರಾದಲ್ಲಿರುವ ಬೇಸ್ ಕ್ಯಾಂಪ್ ಮತ್ತು ದೇವಸ್ಥಾನದ ಮಾರ್ಗದಲ್ಲಿ ಭಕ್ತರ ಸಂಖ್ಯೆ ಮಿತಿ ಮೀರಿದ್ದರಿಂದ, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದೆ.
ವೈಷ್ಣೋದೇವಿ ದೇವಸ್ಥಾನಕ್ಕೆ ಹೊಸದಾಗಿ ಬರುವ ಭಕ್ತರಿಗೂ ನೋಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೇವಾಲಯದ ಮಂಡಳಿ ಮತ್ತು ಸ್ಥಳೀಯ ಜಿಲ್ಲಾ ಆಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದಟ್ಟಣೆ ಕಡಿಮೆಯಾದ ನಂತರ ಯಾತ್ರೆಯನ್ನು ಪುನರಾರಂಭಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ವೈಷ್ಣೋದೇವಿ ದರ್ಶನಕ್ಕಾಗಿ ಬರುವ ಭಕ್ತರು ದೇವಸ್ಥಾನದ ಅಧಿಕೃತ ಪ್ರಕಟಣೆಗಳನ್ನು ಗಮನಿಸಿ ಭೇಟಿಯ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಲಾಗಿದೆ.
ಭಾರತೀಯ ಸಂಪ್ರದಾಯದಂತೆ ಯಗಾದಿಯ ಮುಂದಿನ ಒಂಬತ್ತು ದಿನಗಳನ್ನು ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ಎಂದು ಆಚರಿಸುತ್ತಾರೆ. ಈ ವರ್ಷ ಮಾರ್ಚ್ 19ರಿಂದ ಮಾರ್ಚ್ 27ರವರೆಗೆ ಚೈತ್ರ ನವರಾತ್ರಿ ಆಚರಿಸಲಾಗುತ್ತದೆ.
ಮಾರ್ಚ್ 27 ರಂದು ರಾಮನವಮಿ ಹಬ್ಬದೊಂದಿಗೆ ಚೈತ್ರ ನವರಾತ್ರಿ ಅಂತ್ಯವಾಗುತ್ತದೆ. ಚೈತ್ರ ನವರಾತ್ರಿಯನ್ನು ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬ ಎಂದು ಆಚರಿಸುತ್ತಾರೆ.

