ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ವೈಶಿಷ್ಟ್ಯಪೂರ್ಣ ಸಂಸ್ಕೃತಿ ನಮ್ಮಿಂದ ದೂರಾಗುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಭಾಷೆ, ಸಂಸ್ಕøತಿಯ ಉಳಿವಿಗೆ ಧಕ್ಕೆಯುಂಟಾಗುವ ಸಾಧ್ಯತೆಯಿರುವುದಾಗಿ ಕನ್ನಡದ ಮುಂದಾಳು ಸತ್ಯನಾರಾಯಣ ತಂತ್ರಿ ತಿಳಿಸಿದ್ದಾರೆ.
ಅವರು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಡೆಯುತ್ತಿರುವ ತಿಂಗಳ ಕಾರ್ಯಕ್ರಮ 'ಕಾಸರಗೋಡು ಕನ್ನಡ ಹಬ್ಬ ಅಭಿಯಾನದ ಕಾಸರಗೋಡು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗಡಿನಾಡಿನಲ್ಲಿ ಔದ್ಯೋಗಿಕವಾಗಿ ಕನ್ನಡಕ್ಕೆ ಆಡಳಿತಾತ್ಮಕ ಹೊಡೆತ ಬೀಳುತ್ತಿದ್ದು ಇದನ್ನು ಎದುರಿಸಿ ಹೋರಾಡಲು ಕನ್ನಡಿಗರು ಸನ್ನದ್ಧರಾಗಬೇಕು. ಕಾಸರಗೋಡಿನ ವಿವಿಧ ಸಂಘಟನೆಗಳು ನಡೆಸುತ್ತಿರುವ ಕನ್ನಡಪರ ಕಾರ್ಯಕ್ರಮಗಳ ಮೂಲಕ ಸರ್ಕಾರವನ್ನು ಎಚ್ಚರಿಸಲು ಸಾಧ್ಯ ಎಂದು ತಿಳಿಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ನೃತ್ಯ ವಿದುಷಿ ಸೌಮ್ಯಾ ಶ್ರೀಕಾಂತ್ ಮಧೂರು,ಯುವ ಸಂಘಟಕ,ಗಾಯಕ ಸಿದ್ದೇಶ್ ಕೋಲಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಪತ್ರಕರ್ತ, ಕವಿ ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿದ್ದರು. ದಿವಾಕರ ಕಾಸರಗೋಡು ಪ್ರಾರ್ಥನೆ ಹಾಡಿದರು. ಸಾಂಸ್ಕೃತಿಕ ಭವನದ ಸಂಚಾಲಕ ಗುರುಪ್ರಸಾದ್ ಕೋಟೆಕ್ಕಣಿ ಸ್ವಾಗತಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.
ಕಾರ್ಯದರ್ಶಿ ಸೌಮ್ಯಾ ಶ್ರೀಕಾಂತ್ ಶಿಷ್ಯವೃಂದದವರು ಮತ್ತು ವಿದುಷಿ ಅಂಕಿತಾ ಬದಿಯಡ್ಕ ಅವರಿಂದ ಜಾನಪದ ನೃತ್ಯ, ಭರತನಾಟ್ಯ ವೈಭವ ಪ್ರದರ್ಶನ, ದಿವಾಕರ ಕಾಸರಗೋಡು ಮತ್ತು ಬಳಗದವರಿಂದ ಜಾನಪದ ಹಾಡು, ಭಾವಗೀತೆ, ಕನ್ನಡ ನಾಡಗೀತೆಗಳ ಭಾವಗೀತೆ ಸಂಗಮ ಪ್ರಸ್ತುತಿಗೊಂಡಿತು.



