ಹೈದರಾಬಾದ್ (PTI): 'ಸಿಪಿಐ (ಮಾವೋವಾದಿ) ಸಂಘಟನೆ ಮೇಲಿನ ನಿಷೇಧವನ್ನು ರದ್ದುಗೊಳಿಸಿ, ರಾಜಕೀಯ ಪಕ್ಷದ ಮಾನ್ಯತೆ ನೀಡಬೇಕು' ಎಂದು ಇತ್ತೀಚೆಗಷ್ಟೇ ಶರಣಾಗಿರುವ ನಕ್ಸಲ್ ನಾಯಕ ತಿಪ್ಪಿರಿ ತಿರುಪತಿ ಅಲಿಯಾಸ್ ದೇವುಜಿ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ಮಾವೊವಾದಿ ಸಂಘಟನೆ ಮೇಲಿನ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಗೆ ರಾಜಕೀಯ ಪಕ್ಷದ ಮಾನ್ಯತೆ ದೊರಕಿದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ ಎಂದೂ ಸ್ಪಷ್ಟಪಡಿಸಿದರು.
ದೇಶದಾದ್ಯಂತ 'ನಗರ ನಕ್ಸಲರು' ಅಥವಾ ಇತರ ಹಣೆಪಟ್ಟಿ ಕಟ್ಟಿಕೊಂಡು ಜೈಲಿನಲ್ಲಿರುವ ನಕ್ಸಲ್ ಬೆಂಬಲಿಗರನ್ನು 'ರಾಜಕೀಯ ಕೈದಿ'ಗಳೆಂದು ಗುರುತಿಸಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
'ನಗರ ನಕ್ಸಲರು' ಎಂಬ ಪದ ಬಳಕೆಯು ತಪ್ಪು. ಅದಕ್ಕೆ ಕಾನೂನಿನ ಪ್ರಕಾರ ಯಾವುದೇ ವ್ಯಾಖ್ಯಾನವಿಲ್ಲ' ಎಂದರು.
'ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಕಾನೂನಾತ್ಮಕವಾಗಿ ನಮ್ಮ ಸಂಘಟನೆಯನ್ನು ರಾಜಕೀಯ ಪಕ್ಷವೆಂದು ಗುರುತಿಸಿ ಹಾಗೂ ನಿಷೇಧವನ್ನು ತೆಗೆದು ಹಾಕಲು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿ ಎಂದು ಮನವಿ ಮಾಡಲಾಗಿದೆ. ಅದರಂತೆ ರೇವಂತ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಸಭೆಯ ಫಲಿತಾಂಶದ ಬಗ್ಗೆ ನಮಗೆ ಮಾಹಿತಿ ಇಲ್ಲ' ಎಂದು ಹೇಳಿದರು.
'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಪಿಐ(ಮಾವೋವಾದಿ) ಸಂಘಟನೆಯನ್ನು ರಾಜಕೀಯ ಪಕ್ಷವೆಂದು ಗುರುತಿಸುವ ಪ್ರಕ್ರಿಯೆ ಆರಂಭಿಸಿದರೆ, ಸಂಘಟನೆಯು ತನ್ನ ಸಶಸ್ತ್ರ ವಿಭಾಗವಾಗಿರುವ 'ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ'ಯನ್ನು (ಪಿಎಲ್ಜಿಎ) ವಿಸರ್ಜಿಸಲು ಸಿದ್ಧವಾಗಿದೆ' ಎಂದರು.

