ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯವು 'ರಾಜಕೀಯ ದುಷ್ಕೃತ್ಯ' ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅದರ ಬೆನ್ನಲ್ಲೇ ಪ್ರಧಾನಿ ಅವರು ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ವಿರೋಧ ಪಕ್ಷಗಳ ನಡೆಯನ್ನು ಟೀಕಿಸಿದ್ದಾರೆ.
ಪ್ರಧಾನಿ ಅವರ ಪತ್ರಕ್ಕೆ ಕೃತಜ್ಞತೆ ಸಲ್ಲಿಸಿರುವ ಬಿರ್ಲಾ, 'ಭಾರತದ ಸಂಸದೀಯ ಪ್ರಜಾಪ್ರಭುತ್ವದ ನಿಯಮಗಳು, ಕಾರ್ಯವಿಧಾನಗಳು ಮತ್ತು ಸಂಪ್ರದಾಯಗಳಲ್ಲಿ ಪ್ರಧಾನಿ ಅವರು ಯಾವಾಗಲೂ ಅಚಲ ನಂಬಿಕೆ ಹೊಂದಿದ್ದಾರೆ' ಎಂದು ಹೇಳಿದ್ದಾರೆ.
'ನಿಮ್ಮ ವಿರುದ್ಧ ಲೋಕಸಭೆಯಲ್ಲಿ ತಂದಿದ್ದ ಅವಿಶ್ವಾಸ ನಿರ್ಣಯಕ್ಕೆ ಸದನದಲ್ಲಿ ಸೋಲಾಗಿದೆ. ಈ ರಾಜಕೀಯ ದುಷ್ಕೃತ್ಯವನ್ನು ತಿರಸ್ಕರಿಸಿದ ಸದನದ ಸದಸ್ಯರನ್ನು ಅಭಿನಂದಿಸುತ್ತೇನೆ' ಎಂದು ಹಿಂದಿಯಲ್ಲಿ ಬರೆದ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ.
'ಕುಟುಂಬ ರಾಜಕಾರಣ ಮತ್ತು ಊಳಿಗಮಾನ್ಯ ಮನಃಸ್ಥಿತಿಯಲ್ಲಿ ಮುಳುಗಿರುವ ಕೆಲವು ವ್ಯಕ್ತಿಗಳು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ತಮ್ಮ ಕೈಯೊಳಗೆ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ದೇಶವು ಹತಾಶೆಯಿಂದ ನೋಡುತ್ತಿದೆ' ಎಂದು ದೂರಿದ್ದಾರೆ.
'ಮಾತ್ರವಲ್ಲ, ಸದನದಲ್ಲಿ ಇತರ ಚುನಾಯಿತ ಪ್ರತಿನಿಧಿಗಳು, ವಿಶೇಷವಾಗಿ ಯುವ ಮತ್ತು ಹೊಸ ಸಂಸದರಿಗೆ ಮಾತನಾಡಲು ಸಮಾನ ಅವಕಾಶಗಳನ್ನು ನೀಡುವುದು ಅವರಿಗೆ ಇಷ್ಟವಾಗುತ್ತಿಲ್ಲ. ಇಂತಹ ಮನಃಸ್ಥಿತಿ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ' ಎಂದು ಟೀಕಿಸಿದ್ದಾರೆ.
'ಸದನದಲ್ಲಿ ಮಾತನಾಡುವ ಅವಕಾಶವು ಆಯ್ದ ಕೆಲವರಿಗೆ ಸೀಮಿತವಾಗಿಲ್ಲ. ಸಮಾಜದ ಪ್ರತಿಯೊಂದು ವರ್ಗ ಹಾಗೂ ದೇಶದ ಪ್ರತಿಯೊಂದು ಪ್ರದೇಶದ ಧ್ವನಿಗಳಿಗೆ ಸದನವು ವೇದಿಕೆ ಒದಗಿಸಬೇಕು' ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

