ನವದೆಹಲಿ: ಗಂಗಾ ನದಿಯ ತಟ ಹಾಗೂ ಪ್ರವಾಹದ ಬಯಲು ಪ್ರದೇಶದಲ್ಲಿನ ಅಕ್ರಮ ನಿರ್ಮಾಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಮತ್ತು ಅತಿಕ್ರಮಣವನ್ನು ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಗಂಗಾ ನದಿಯ ಪುನಶ್ಚೇತನ, ರಕ್ಷಣೆ ಮತ್ತು ನಿರ್ವಹಣೆ ಕುರಿತ ಅಧಿಸೂಚನೆಯ ಅನುಷ್ಠಾನಕ್ಕೆ ಇದುವರೆಗೂ ತೆಗೆದುಕೊಂಡ ಕ್ರಮಗಳನ್ನು ದಾಖಲಿಸುವಂತೆಯೂ ಕೇಳಿದೆ.
'ಅಧಿಸೂಚನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಪ್ರಾಧಿಕಾರಕ್ಕೆ ಎದುರಾಗಿರುವ ಅಡೆತಡೆಗಳು ಯಾವುವು? ನದಿ ಹರಿವಿನ ರಾಜ್ಯಗಳಲ್ಲಿ ನದಿ ಬಯಲು ಮತ್ತು ದಡವು ಅತಿಕ್ರಮಣಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಾಧಿಕಾರವು ಯಾವ ಯಾವ ಕ್ರಮ ತೆಗೆದುಕೊಳ್ಳಲು ಉದ್ದೇಶಿಸಿದೆ' ಎಂದು ನ್ಯಾಯಪೀಠವು ಪ್ರಶ್ನಿಸಿದೆ.
ಗಂಗಾ ಜಲಾನಯನ ಪ್ರದೇಶದ ರಾಜ್ಯಗಳಿಗೂ ನೋಟಿಸ್ ಜಾರಿ ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳನ್ನು ಮೀರಿ ವಿಶಾಲ ದೃಷ್ಟಿಕೋನದಿಂದ ಪರಿಶೀಲಿಸಬೇಕಾದ ಅಗತ್ಯವಿದೆ ಎಂದಿದೆ.
'ನದಿ ತಟವು ವ್ಯಾಪಕ ಪ್ರಮಾಣದಲ್ಲಿ ಅತಿಕ್ರಮಣಕ್ಕೆ ಒಳಗಾಗಿದೆ' ಎಂದ ಅರ್ಜಿದಾರರ ಪರ ವಕೀಲರಾದ ಆಕಾಶ್ ವಸಿಷ್ಠ ಅವರು, 'ಶುದ್ಧ ನೀರಿರುವ ಕಡೆ ಡಾಲ್ಫಿನ್ಗಳೂ ವಾಸ ಇವೆ' ಎಂದು ನ್ಯಾಯಪೀಠದ ಗಮನಸೆಳೆದರು.
ನದಿಯ ಬಯಲು ಮತ್ತು ತಟವನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಅಧಿಸೂಚನೆಗೆ ಪೂರಕವಾಗಿ, ಈ ನ್ಯಾಯಾಲಯದಿಂದ ಯಾವ ರೀತಿಯ ಪರಿಣಾಮಕಾರಿ ನಿರ್ದೇಶನಗಳನ್ನು ಪಡೆಯಲು ಪ್ರಾಧಿಕಾರವು ಬಯಸುತ್ತದೆ ಎಂಬುದನ್ನು ತಿಳಿಸುವಂತೆಯೂ ಕೋರಿದೆ.
ಪಟ್ನಾ ನಿವಾಸಿ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಏ. 23ಕ್ಕೆ ವಿಚಾರಣೆಯನ್ನು ಮುಂದೂಡಿದೆ.

