ಮಾಸ್ಕೊ: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೋಯಿ ಲಾವ್ರೋವ್ ಅವರು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಪರಿಸ್ಥಿತಿ ಬಗ್ಗೆ ಬುಧವಾರ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದರು.
'ಇಬ್ಬರೂ ಸಚಿವರು ಇರಾನ್ ಮತ್ತು ಸುತ್ತಮುತ್ತಲಿನ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಅಲ್ಲಿನ ದೇಶಗಳಲ್ಲಿ ತ್ವರಿತವಾಗಿ ಸಾಮಾನ್ಯ ಸ್ಥಿತಿ ಮರಳುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು' ಎಂದು ರಷ್ಯಾದ ವಿದೇಶಾಂಗ ಇಲಾಖೆ ತನ್ನ ವೆಬ್ ಪೋರ್ಟಲ್ನಲ್ಲಿ ತಿಳಿಸಿದೆ.
'ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸಮರ್ಥವಾದ ಪರಿಹಾರ ಕಂಡುಕೊಳ್ಳಲು ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಮತ್ತು ಬ್ರಿಕ್ಸ್ ಒಕ್ಕೂಟ ನಡೆಸುವ ಪ್ರಯತ್ನಗಳಿಗೆ ನಮ್ಮ ಬೆಂಬಲ ಇದೆ' ಎಂದು ರಷ್ಯಾ ಹೇಳಿದೆ.
ಎಸ್ಸಿಒ ಮತ್ತು ಬ್ರಿಕ್ಸ್ ಸದಸ್ಯ ರಾಷ್ಟ್ರವಾಗಿರುವ ಇರಾನ್ ಮೇಲೆ ಕಳೆದ 12 ದಿನಗಳಿಂದ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸುತ್ತಿವೆ. ಇರಾನ್ ಕೂಡಾ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ.ಇದು ರಷ್ಯಾ ಮತ್ತು ಭಾರತದ ರಾಜತಾಂತ್ರಿಕ ಪಾಲುದಾರ ರಾಷ್ಟ್ರಗಳಲ್ಲಿ ನಾಗರಿಕ ಹಾನಿ ಮತ್ತು ಇಂಧನ ಮೂಲಸೌಕರ್ಯ ನಾಶಕ್ಕೆ ಕಾರಣವಾಗಿದೆ.
'ಮಾತುಕತೆ ಸಂದರ್ಭದಲ್ಲಿ ಮುಂಬರುವ ರಾಜಕೀಯ ಭೇಟಿ ಸೇರಿದಂತೆ ದ್ವಿಪಕ್ಷೀಯ ಕಾರ್ಯಸೂಚಿಯ ಹಲವು ವಿಚಾರಗಳ ಕುರಿತೂ ಜೈಶಂಕರ್ ಮತ್ತು ಲಾವ್ರೋವ್ ಚರ್ಚಿಸಿದರು' ಎಂದು ರಷ್ಯಾ ವಿದೇಶಾಂಗ ಇಲಾಖೆ ತಿಳಿಸಿದೆ.

