ಕಾಸರಗೋಡು: ನವೀಕರಿಸಿದ ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನೆಯೊಂದಿಗೆ ಎನ್ ಡಿ ಎ ಕಾಸರಗೋಡು ಜಿಲ್ಲಾ ಚುನಾವಣಾ ಕಚೇರಿ ಮತ್ತು ಶಕ್ತಿ ಕೇಂದ್ರ ಉಸ್ತುವಾರಿಗಳ ಸಭೆ ಪಕ್ಷದ ಜಿಲ್ಲಾ ಕಚೇರಿ ನಗರದ ಡಾ. ಶ್ಯಾಮಪ್ರಸಾದ ಮುಖರ್ಜಿ ಮಂದಿರದಲ್ಲಿ ನಡೆಯಿತು.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಹಿರಿಯ ಮುಖಂಡ ಸಿಕೆ ಪದ್ಮನಾಭನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಿರುವನಂತಪುರ ರಾಜಧಾನಿಯಲ್ಲಿ ಬಿಜೆಪಿಗೆ ಲಭಿಸಿರುವ ಜನಾದೇಶ ಮುಂದಿನ ಚುನಾವಣೆಯಲ್ಲಿ ರಾಜ್ಯಾದ್ಯಂತ ಗೆಲುವಿಗೆ ಹಾದಿಮಾಡಿಕೊಡಲಿರುವುದಾಗಿ ತಿಳಿಸಿದರು.
ಸಂಪೂರ್ಣ ಪಕ್ಷ, ಸರ್ಕಾರ ಮತ್ತು ಸಚಿವ ಸಂಪುಟವನ್ನೆ ತನ್ನ ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಗ ಶಬರಿಮಲೆ ಚಿನ್ನ ಲೂಟಿಮಾಡಿರುವುದು ಸಾಕಾಗದೆ, ಇದೀಗ ಶಬರಿಮಲೆ ಅಯ್ಯಪ್ಪನನ್ನೇ ನುಂಗಿ ತೇಗು ಹಾಕಲು ಮರಳಿ ಮತಯಾಚಿಸಲು ಬರುತ್ತಿರುವ ಬಗ್ಗೆ ಜನತೆ ಜಾಗೃತರಾಗಿರಬೇಕು ಎಂದು ತಿಳಿಸಿದರು. ಕೇರಳದಲ್ಲಿ ಸಣ್ಣಪ್ರಮಾಣದ ಮತಗಳ ಅಂತರದಲ್ಲಿ ಗೆಲುವು ಕೈತಪ್ಪಿ ಹೋದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ನಿಚ್ಛಳಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ಕೋಮುವಾದಿಗಳಿಗೆ ಮತ್ತು ಓಲೈಕೆ ರಾಜಕೀಯದಿಂದ ಬೇಸತ್ತಿರುವ ಕೇರಳದ ಜನತೆ ಈ ಬಾರಿ ಅಭಿವೃದ್ಧಿಘಾಗಿ ಬಿಜೆಪಿಯನ್ನುಬೆಂಬಲಿಸಲಿರುವುದಾಗಿ ತಿಳಿಸಿದರು.
ಈ ಸಂದರ್ಭ ನವೀಕೃತ ಕಚೇರಿಯಲ್ಲಿ ಸ್ಥಾಪಿಸಲಾದ, ಪಕ್ಷದ ಧೀಮಂತ ನೇತಾರ ಕೆ. ಜಿ. ಮಾರಾರ್ ಪ್ರತಿಮೆಗೆ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಹಾರಾರ್ಪಣೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ದೀನದಯಾಳ್ ಉಪಾಧ್ಯಾಯ, ಶ್ಯಾಂಪ್ರಸಾದ್ ಮುಖರ್ಜಿ ಪ್ರತಿಮೆಗಳಿಗೆ ಸಿ. ಕೆ. ಪದ್ಮನಾಭನ್ ಹಾಗೂ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಹಾರಾರ್ಪಣೆ ಮಾಡಿದರು.
ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ. ಕೆ. ಸಜೀವನ್, ಕೋಯಿಕ್ಕೋಡು ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಉಪಾಧ್ಯಕ್ಷ ವಿಜಯ ಕುಮಾರ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ಮನುಲಾಲ್ ಮೇಲತ್ತ್, ಎನ್. ಬಾಬುರಾಜ್, ರಾಜ್ಯ ಸಮಿತಿ ಸದಸ್ಯರುಗಳಾದ ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರಕಟ್ಟ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕರುಣಾಕರನ್ ಮಾಸ್ಟರ್, ರಾಮಕೃಷ್ಣನ್ ವಾಯುನ್ನೋರಾಡಿ, ರಾಮಚಂದ್ರನ್ ಉಪಸ್ಥೀತರಿದ್ದರು.


