ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ 'ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026' ಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಹಕ್ಕುಗಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಪ್ರತಿಗಾಮಿ ಮಸೂದೆ ಎಂದು ದೂರಿದ್ದಾರೆ.
'ಈ ಮಸೂದೆಯು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಜನರ ಗುರುತು, ಘನತೆ ಮತ್ತು ಸಮಾನತೆಯನ್ನು ಹಾಳುಮಾಡಲಿದೆ' ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
'ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
ಪ್ರಸ್ತಾವಿತ ತಿದ್ದುಪಡಿಯು ಸಮುದಾಯದ ಸದಸ್ಯರಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಇದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ವರ್ಸಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ತತ್ವಗಳಿಗಿಂತ ಭಿನ್ನವಾಗಿದೆ' ಎಂದು ಹೋರಾಟಗಾರರು ಆರೋಪಿಸಿದ್ದಾರೆ.
'ಈ ಪ್ರಸ್ತಾವಿತ ತಿದ್ದುಪಡಿ ಮಸೂದೆ ತುಂಬಾ ಮೂರ್ಖತನದಿಂದ ಕೂಡಿದೆ. ತುಂಬಾ ಪ್ರತಿಗಾಮಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು, ಅಂತರ ಲಿಂಗಿಗಳಿಗೆ (ಇಂಟರ್ಸೆಕ್ಸ್) ಇದು ವಿರೋಧಿಯಾಗಿದ್ದು, ಸ್ವೀಕಾರಾರ್ಹವಲ್ಲ' ಎಂದು ಲಿಂಗತ್ವ ಅಲ್ಪಸಂಖ್ಯಾತ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಪ್ರಸ್ತಾವಿತ ಮಸೂದೆಯ ಚೌಕಟ್ಟಿನಲ್ಲಿ ಸಮುದಾಯದ ಗುರುತುಗಳನ್ನು ಸೀಮಿತಗೊಳಿಸಿರುವುದಕ್ಕೆ ಪದ್ಮಶಾಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಹಿಜ್ರಾ, ಕಿನ್ನರ್, ಜೋಗಪ್ಪ ಮತ್ತು ಜೋಗತಿ ಅವರ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಗುರುತುಗಳನ್ನು ಮಾತ್ರ ಸ್ವೀಕರಿಸುವುದು ಮತ್ತು ನಪುಂಸಕ ಎಂಬ ಪದವನ್ನು ಬಳಸುವುದು ಸ್ವೀಕಾರಾರ್ಹವಲ್ಲ' ಎಂದು ಅವರು ವಾದಿಸಿದ್ದಾರೆ.
'ನಪುಂಸಕ ಎಂಬುದು ವಸಾಹತುಶಾಹಿ ಕಾಲದಿಂದ ಬಂದಿರುವ ಅವಹೇಳನಕಾರಿ ಪದವಾಗಿದೆ. ಅದು ಇಂದು ಅಸ್ತಿತ್ವದಲ್ಲಿರುವ ಲಿಂಗ ಗುರುತುಗಳ ವೈವಿಧ್ಯವನ್ನು ಪ್ರತಿನಿಧಿಸುವುದಿಲ್ಲ' ಎಂದು ಹೇಳಿದ್ದಾರೆ.
'ಪ್ರಸ್ತಾವಿತ ತಿದ್ದುಪಡಿ ಮಸೂದೆಯು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ. ಅಲ್ಲದೇ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಪ್ರಾಯೋಗಿಕ ಸವಾಲುಗಳನ್ನು ಸೃಷ್ಟಿಸಬಹುದು' ಎಂದು ಕಾರ್ಯಕರ್ತೆ ಮೀರಾ ಪರಿದಾ ಅಭಿಪ್ರಾಯಪಟ್ಟಿದ್ದಾರೆ.
'ಇದು ಸಾಂವಿಧಾನಿಕ ಹಕ್ಕುಗಳಿಗೆ ಹೊಂದಿಕೆಯಾಗುವುದಿಲ್ಲ. ನಮ್ಮ ಗೋಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ನಮ್ಮ ದೈಹಿಕ ಅಸ್ಮಿತೆ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಇವೆಲ್ಲವನ್ನೂ ನ್ಯಾಯಾಲಯವು 2014ರ ಎನ್ಎಎಲ್ಎಸ್ಎ ತೀರ್ಪಿನಲ್ಲಿ ಗುರುತಿಸಿದೆ' ಎಂದು ಅವರು ವಿವರಿಸಿದರು.

