ಕಾಸರಗೋಡು : ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದೃಶ್ಯ, ಶ್ರವ್ಯ ಹಾಗೂ ನವ ಮಾಧ್ಯಮಗಳ ಮೂಲಕ ನೀಡುವ ಜಾಹೀರಾತುಗಳಿಗೆ ಜಿಲ್ಲಾ ಮಟ್ಟದ ಮಾಧ್ಯಮ ನಿಗಾ ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ.
ಸಮಿತಿಯ ಮುಂದೆ ನಿಗದಿತ ನಮೂನೆಯನ್ನು ಸಲ್ಲಿಸಿ ಅನುಮತಿ ಪಡೆಯಬೇಕು. ಈ ನಿಯಮ ಪಾಲಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಚುನಾವಣೆಗೆ 48 ಗಂಟೆಗಳ ಮೊದಲು ಮತ್ತು ಚುನಾವಣಾ ದಿನದಂದು ಮತ್ತು ಜಾಹೀರಾತು ನೀಡಲು ನಿಗದಿಪಡಿಸಿದ ದಿನಾಂಕಕ್ಕಿಂತ ಎರಡು ದಿನಗಳ ಮೊದಲು ಮುದ್ರಣ ಮಾಧ್ಯಮ ಜಾಹೀರಾತುಗಳನ್ನು ಪ್ರಕಟಿಸಲು ಅನುಮತಿ ಕಡ್ಡಾಯವಾಗಿದ್ದು, ಇದಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇತರ ದೇಶಗಳ ಟೀಕೆ, ದೇಶದ ಕೋಮು ಮತ್ತು ಸಾಮಾಜಿಕ ಏಕತೆಗೆ ಧಕ್ಕೆ ತರುವ ಹಾಗೂ ಮಾನಹಾನಿಕರ ವಿಷಯ, ವೈಯಕ್ತಿಕ ನಿಂದನೆ,ಚುನಾವಣಾ ಜಾಹೀರಾತುಗಳಲ್ಲಿ ನ್ಯಾಯಾಂಗ ನಿಂದನೆ ವಿಷಯ, ರಾಷ್ಟ್ರಪತಿ ಮತ್ತು ನ್ಯಾಯಾಂಗದ ವಿರುದ್ಧದ ವಿಷಯ, ಧಾರ್ಮಿಕ ಸಂಸ್ಥೆಗಳ ಚಿತ್ರಗಳು ಮತ್ತು ಧಾರ್ಮಿಕ ಚಿಹ್ನೆಗಳನ್ನು ಚುನಾವಣಾ ಜಾಹೀರತುಗಳಲ್ಲಿ ಪ್ರಕಟಿಸದಿರುವಂತೆಯೂ ಸೂಚಿಸಲಾಗಿದೆ.

