ಬದಿಯಡ್ಕ: ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ ತಿಂಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬದಿಯಡ್ಕ ಪಂಚಾಯತ್ನಲ್ಲಿ ಸಮಸ್ಯೆ ಸೃಷ್ಟಿಗೆ ಯತ್ನಿಸುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ದೂರಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಪತ್ರ ಬರೆದ ಅವರು ಮಾರ್ಚ್ ತಿಂಗಳು ಕೊನೆಗೊಳ್ಳುವ ಮೊದಲು ಪಂಚಾಯತ್ ಕಚೇರಿಯಿಂದ ಯಾವುದೇ ಅಧಿಕಾರಿಯನ್ನು ವರ್ಗಾಯಿಸಬಾರದೆಂದು ಒತ್ತಾಯಿಸಿದ್ದಾರೆ.
ಪಂಚಾಯತ್ನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದ ವೇಳೆ ಕಚೇರಿಯಲ್ಲಿ ೧೦ರಷ್ಟು ಹುದ್ದೆಗಳು ಖಾಲಿಯಾಗಿತ್ತು. ಪಂಚಾಯತ್ ಆಡಳಿತ ನಿರಂತರ ಒತ್ತಾಯದ ಮೇರೆಗೆ ಕಾರ್ಯದರ್ಶಿ ಸಹಿತ ಇತರ ಉದ್ಯೋಗಿಗಳ ನೇಮಕಾತಿ ನಡೆಸಲಾಗಿತ್ತು. ಆದರೆ ಈಗ ಕಾರ್ಯದರ್ಶಿ ರಾಜಕೀಯ ಒತ್ತಡದಿಂದ ಸ್ವತಃ ವರ್ಗಾವಣೆ ಪಡೆದಿದ್ದಾರೆ. ಕೆಲವರು ಇದೇ ಹಾದಿಯಲ್ಲಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಆರ್ಥಿಕ ವರ್ಷ ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಲಿರುವಂತೆ ವಾರ್ಷಿಕ ಬಜೆಟ್, ಯೋಜನೆ ರೂಪೀಕರಣ, ಕಳೆದ ವರ್ಷದ ಯೋಜನೆಯ ಪೂರ್ತೀಕರಣ ಎಂಬಿವು ಪೂರ್ತಿಗೊಳ್ಳಬೇಕಾಗಿದೆ. ಆದರೆ ಇದಕ್ಕೆ ಉದ್ಯೋಗಿಗಳ ಕೊರತೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಕೊರತೆ ಉಂಟಾಗದಂತೆ ಪಂಚಾಯತ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಅದರಿಂದಾಗಿ ಮಾರ್ಚ್ ಕೊನೆಯ ವರೆಗೆ ಪಂಚಾಯತ್ನ ಯಾವುದೇ ಉದ್ಯೋಗಿಗಳನ್ನು ವರ್ಗಾವಣೆ ಮಾಡಬಾರದೆಂದು ಅಧ್ಯಕ್ಷ ಪತ್ರದಲ್ಲಿ ವಿನಂತಿಸಿದ್ದಾರೆ.

