ನವದೆಹಲಿ (PTI): ಶಾಲೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳನ್ನು ಛೇಡಿಸುವ, ಕಿರುಕುಳ ನೀಡುತ್ತಿರುವ ಪ್ರಕರಣಗಳು ಕಳವಳಕಾರಿಯಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ರಾಷ್ಟ್ರೀಯ ನೀತಿ ಚೌಕಟ್ಟನ್ನು ರೂಪಿಸಬೇಕು ಎಂದು ಸುಧಾಮೂರ್ತಿ ಬುಧವಾರ ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, 'ಎನ್ಸಿಇಆರ್ಟಿ ವರದಿಗಳ ಪ್ರಕಾರ, ಭಾರತದ ಶಾಲೆಗಳಲ್ಲಿ ಶೇಕಡ 32ರಷ್ಟು ವಿದ್ಯಾರ್ಥಿಗಳು ಕಿರುಕುಳ, ಛೇಡಿಸುವ ಘಟನೆಗಳನ್ನು ಎದುರಿಸುತ್ತಿದ್ದಾರೆ. ಶೇ 24ರಷ್ಟು ಮಕ್ಕಳು ಹೊಡೆದಾಟ ಹಾಗೂ ತಳ್ಳಾಟಕ್ಕೆ ಗುರಿಯಾಗಿದ್ದಾರೆ. ಶೇ 22ರಷ್ಟು ಮಕ್ಕಳು ತಮ್ಮ ಸಹಪಾಠಿಗಳಿಂದಲೇ ಬೆದರಿಕೆ ಎದುರಿಸುತ್ತಿದ್ದಾರೆ' ಎಂದರು.
'ಅಲ್ಲದೇ, ಈ ಸಮಸ್ಯೆಗಳನ್ನು ಪರಿಹರಿಸಲು ಭಾವನಾತ್ಮಕ ಸೂಕ್ಷ್ಮತೆಯನ್ನು ತಿಳಿಸುವಂತ ತರಬೇತಿಯನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಪ್ರತೀ ಶಾಲೆಯು ಕಾನೂನಾತ್ಮಕವಾಗಿ ಮಕ್ಕಳಿಗೆ ಸುರಕ್ಷಿತ ಹಾಗೂ ಘನತೆಯ ವಾತಾವರಣವನ್ನು ಒದಗಿಸಬೇಕು' ಎಂದು ಆಗ್ರಹಿಸಿದರು.

