ತಿರುವನಂತಪುರಂ: ಕೇರಳದ ವಯನಾಡ್ ಮತ್ತು ಕೋಯಿಕ್ಕೋಡ್ ನಡುವಿನ ಅವಳಿ ಸುರಂಗ ರಸ್ತೆ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಚಾಲನೆ ನೀಡಿದರು.
ವಯನಾಡ್ನ ಮೆಪ್ಪಾಡಿ ಬಳಿಯ ಕಳ್ಳಾಡಿ ಮತ್ತು ಕೋಯಿಕ್ಕೋಡ್ನ ಆನಕಾಂಪೊಯಿಲ್ ನಡುವಿನ ಅವಳಿ ಸುರಂಗದಿಂದಾಗಿ ಸುಮಾರು 30 ಕಿ.ಮೀ. ದೂರವು ಕಡಿಮೆಯಾಗಲಿದೆ. ಪ್ರಯಾಣದ ಸಮಯ 90 ನಿಮಿಷಗಳಷ್ಟು ಉಳಿತಾಯವಾಗಲಿದೆ.
ಎಲ್ಡಿಎಫ್ ಸರ್ಕಾರವು ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಈ ಸುರಂಗ ರಸ್ತೆ ಯೋಜನೆಯನ್ನು ಮೂಲಸೌಕರ್ಯ ಅಭಿವೃದ್ಧಿಯ ಪ್ರಮುಖ ಸಾಧನೆ ಎಂದು ಬಿಂಬಿಸುತ್ತಿದೆ. ಕಳೆದ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಈ ಯೋಜನೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದರು. ಶುಕ್ರವಾರ ಕೋಯಿಕ್ಕೋಡ್ನ ಆನಕಾಂಪೊಯಿಲ್ ಬಳಿ ಬಂಡೆಗಳ ಸ್ಫೋಟಕ್ಕೆ ಚಾಲನೆ ನೀಡಿದರು.
ಈ ಯೋಜನೆಯಿಂದ ಪಶ್ಚಿಮ ಘಟ್ಟಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಪರಿಸರವಾದಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಆದರೂ, 17.26 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸುವ ಈ ಯೋಜನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯವು ಅಂತಿಮ ಹಂತ-2ರ ಒಪ್ಪಿಗೆಯನ್ನು ನೀಡಿದೆ.
ಅವಳಿ ಸುರಂಗ ರಸ್ತೆಯ ಉದ್ದ 8.1 ಕಿ.ಮೀ. ಹೊಂದಿದ್ದು, ಒಟ್ಟು ಯೋಜನಾ ವೆಚ್ಚ ₹2,134 ಕೋಟಿಯಾಗಿದೆ. ಕೊಂಕಣ ರೈಲ್ವೆ ನಿಗಮವು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಒಮ್ಮೆ ಕಾರ್ಯಾರಂಭ ಮಾಡಿದರೆ ಇದು ದೇಶದ ಮೂರನೇ ಅತಿ ಉದ್ದದ ಸುರಂಗ ರಸ್ತೆಯಾಗಲಿದೆ. ಈ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.
ಈ ಯೋಜನೆಗೆ ಪರಿಸರ ಅನುಮತಿ ನೀಡಿದ್ದ ತಜ್ಞರ ಸಮಿತಿಯು, ನಿರ್ಮಾಣದ ಸಮಯದಲ್ಲಿ ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡಲು ಕೆಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು.
ಪರಿಸರವಾದಿಗಳ ಪ್ರಮುಖ ಕಳವಳವೆಂದರೆ, ಸುರಂಗ ಮಾರ್ಗದ ಒಂದು ತುದಿಯಾಗಿರುವ ವಯನಾಡ್ನ ಮೆಪ್ಪಾಡಿ ಪ್ರದೇಶವು ಹಲವಾರು ಭೂಕುಸಿತಗಳಿಗೆ ಸಾಕ್ಷಿಯಾಗಿದೆ. 2024ರಲ್ಲಿ ಚೂರಲಮಲಾ- ಮುಂಡಕ್ಕೈ ಭಾಗದಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ 300 ಮಂದಿ ಮೃತಪಟ್ಟಿದ್ದರು.
ಯೋಜನೆಗೆ ಸ್ಥಳೀಯರ ಸ್ವಾಗತ:
ವಯನಾಡ್ನ ಹೆಚ್ಚಿನ ಜನರು ಈ ಯೋಜನೆಯನ್ನು ಸ್ವಾಗತಿಸುತ್ತಿದ್ದಾರೆ. ತಾಮರಶ್ಶೇರಿ ಘಾಟ್ ರಸ್ತೆಯಲ್ಲಿ ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವೈದ್ಯಕೀಯ ಹಾಗೂ ತುರ್ತು ಉದ್ದೇಶಗಳಿಗಾಗಿ ಕೋಯಿಕ್ಕೋಡ್ಗೆ ಹೋಗುವಾಗ ಸಮಸ್ಯೆ ಉಂಟಾಗುತ್ತಿತ್ತು. ಈ ಸುರಂಗ ರಸ್ತೆ ನಿರ್ಮಾಣವಾದರೆ ಈ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂಬ ಆಸೆ ಸ್ಥಳೀಯರದ್ದು.

