ಕಾಸರಗೋಡು: ವಿಧಾನಸಭಾ ಚುನಾವಣೆಯ ಸಂದರ್ಭ ವಿವಿಧ ಮತಗಟ್ಟೆ, ಚುನಾವಣಾ ಸಾಮಗ್ರಿ ವಿತರಣೆ, ಸ್ವೀಕೃತಿ ಕೇಂದ್ರಗಳಿಗೆ ಆಹಾರ ಪೂರೈಕೆ ಜವಾಬ್ದಾರಿ ಹೊತ್ತಿದ್ದ ಕುಟುಂಬಶ್ರೀಯ ಆಹಾರ ಪ್ಯಾಂಟ್ರಿ ಭರೋಬ್ಬರಿ 20ಲಕ್ಷಕ್ಕೂ ಹೆಚ್ಚಿನ ವಹಿವಟು ನಡೆಸಿದೆ. ಕುಟುಂಬಶ್ರೀ ಆಹಾರ ಪೂರೈಕೆಯಿಂದ ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಇತರರಿಗೆ ನಿರಾಳತೆಯನ್ನುಂಟುಮಾಡಿತ್ತು.
ಕಾಸರಗೋಡು ಜಿಲ್ಲೆಯ 1146 ಮತಗಟ್ಟೆಗಳು ಮತ್ತು ಚುನಾವಣಾ ಸಾಮಗ್ರಿ ವಿತರಣೆ, ಸ್ವೀಕೃತಿ ಕೇಂದ್ರಗಳಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಆಹಾರ ವಿತರಣೆ ನಡೆಸಿದ್ದು, ಈ ಮೂಲಕ 20,69,412 ರೂ. ಸಂಗ್ರಹವಾಗಿದೆ. ಸಮಗ್ರ ಯೋಜನೆಯೊಂದಿಗೆ ನಡೆಸಲಾದ ಈ ಆಹಾರವಿತರಣಾ ಜಾಲ ಜಿಲ್ಲೆಯಲ್ಲಿ ಮಹಿಳಾ ಗುಂಪಿನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಚುನಾವಣಾ ದಿನಾಂಕ ಘೋಷಣೆಯಾದ ನಂತರದ ದಿನಗಳಲ್ಲಿ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಆಹಾರ ಪೂರೈಕೆಗಿರುವ ವ್ಯಾಪಕ ಸಿದ್ಧತೆಗಳನ್ನು ಪ್ರಾರಂಭಿಸಲಾಗಿತ್ತು. ಆಹಾರ ವಿತರಣೆಗಾಗಿ ಜಿಲ್ಲೆಯಾದ್ಯಂತ 324 ಕೆಫೆ ಘಟಕಗಳನ್ನು ಸ್ಥಾಪಿಸಲಾಯಿತು. ಅಧಿಕಾರಿಗಳಿಗೆ ಯಾವುದೇ ಅಡಚಣೆಯಿಲ್ಲದೆ ಅಗತ್ಯ ಉಪಹಾರ, ಮಧ್ಯಾಹ್ನದ ಭೋಜನ ಮತ್ತು ಸಾಯಂಕಾಳದ ಲಘು ಉಪಹರ ಒದಗಿಸಲಾಗಿತ್ತು. ಪ್ರತಿ ಬೂತ್ಗೆ ಸಕಾಲದಲ್ಲಿ ಆಹಾರ ತಲುಪಿಸಲು ವಿಶೇಷ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಲಾಗಿತ್ತು.
ಚುನಾವಣಾ ಆಯೋಗದ ಸೂಚನೆಗಳಂತೆ ಕುಟುಂಬಶ್ರೀಯ ಚಟುವಟಿಕೆಗಳು ಸಂಪೂರ್ಣವಾಗಿ ಹಸಿರು ಸಂಹಿತೆಯಿಂದ ಕೂಡಿತ್ತು. ಪ್ಲಾಸ್ಟಿಕ್ ಕವರ್ಗಳು ಅಥವಾ ಬಳಸಿ ಎಸೆಯುವ ಪಾತ್ರೆಗಳ ಬದಲು ಪರಿಸರ ಸ್ನೇಹಿ ರೀತಿಯಲ್ಲಿ ಆಹಾರವನ್ನು ಬಡಿಸಿ ಪ್ಯಾಕ್ ಮಾಡಲಾಗಿತ್ತು. ಈ ಮೂಲಕ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ತಪ್ಪಿಸಲಾಗಿತ್ತು.

