ನವದೆಹಲಿ: ಮುಂಬರಲಿರುವ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಹಿಳಾ ಮೀಸಲಾತಿ ಅಡಿಯಲ್ಲಿ ನಡೆದರೆ ಭಾರತೀಯ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠ ಮತ್ತು ಚೈತನ್ಯದಾಯಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಅಂಬೇಡ್ಕರ್ ಅವರ 135ನೇ ಜಯಂತಿಯ ದಿನವಾದ ಇಂದು ದೇಶದ ಮಹಿಳೆಯರಿಗೆ ಬರೆದ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಶಾಸನ ಸಭೆಗಳಲ್ಲೂ ಅವರ ಭಾಗವಹಿಸುವಿಕೆ ಹೆಚ್ಚುವುದು ಅತ್ಯಂತ ಸೂಕ್ತ ಎಂದು ತಿಳಿಸಿದ್ದಾರೆ.
ಪ್ರಧಾನಿ ಪತ್ರದಲ್ಲಿರುವ ಪ್ರಮುಖ ಅಂಶಗಳು...
ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ (ತಿದ್ದುಪಡಿ) ಅಂಗೀಕಾರವಾಗಬೇಕು. ಇದರಲ್ಲಿ ಯಾವುದೇ ವಿಳಂಬವಾದರೆ ಅದು ದುರದೃಷ್ಟಕರ ಮತ್ತು ಭಾರತದ ಮಹಿಳೆಯರಿಗೆ ಮಾಡುವ ಘೋರ ಅನ್ಯಾಯ ಎಂದು ಮೋದಿ ಹೇಳಿದ್ದಾರೆ.
2029ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಸಂಪೂರ್ಣ ಮಹಿಳಾ ಮೀಸಲಾತಿಯೊಂದಿಗೆ ನಡೆದರೆ ನಮ್ಮ ಪ್ರಜಾಪ್ರಭುತ್ವ ಮತ್ತಷ್ಟು ಚೈತನ್ಯ ಪಡೆಯಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳೆಯರು ತಮಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕಿಗಾಗಿ ಕಾಯುವ ಅಗತ್ಯವಿಲ್ಲ, ಶಾಸನ ಸಭೆಗಳಲ್ಲಿ ಮಹಿಳೆಯರ ಧ್ವನಿ ಬಲವಾದಾಗ, ಪ್ರಜಾಪ್ರಭುತ್ವದ ಧ್ವನಿಯೇ ಬಲಗೊಳ್ಳುತ್ತದೆ ಎಂದು ಅವರು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ದೇಶದ ಕೋಟ್ಯಂತರ ಮಹಿಳೆಯರ ಆಶೀರ್ವಾದ ಕೋರಿರುವ ಪ್ರಧಾನಿ, ಸ್ಥಳೀಯ ಸಂಸದರಿಗೆ ಪತ್ರ ಬರೆಯುವ ಮೂಲಕ ಈ ಐತಿಹಾಸಿಕ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.
2023ರಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಅಂಗೀಕಾರವಾಗಿತ್ತು. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು (ಶೇ.33) ಸ್ಥಾನಗಳನ್ನು ಮೀಸಲಿಡಲು ಅವಕಾಶ ಕಲ್ಪಿಸುತ್ತದೆ.
ಈಗ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ, ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 816 ಕ್ಕೆ ಏರಿಕೆಯಾಗಲಿವೆ. ಅದರಲ್ಲಿ 273 ಸೀಟುಗಳು ಮಹಿಳೆಯರಿಗೆ ಮೀಸಲಿರಲಿವೆ.
ಕಾನೂನಿನ ಪ್ರಕಾರ 2027ರ ಜನಗಣತಿಯ ನಂತರ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ನಡೆಸಿ 2034ರ ವೇಳೆಗೆ ಈ ಮಸೂದೆ ಜಾರಿಗೆ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರ 2029ರ ಲೋಕಸಭೆ ಚುನಾವಣೆಯಿಂದಲೇ ಜಾರಿಗೆ ತರಲು ಕಾನೂನಿಗೆ ತಿದ್ದುಪಡಿ ತರುತ್ತಿದೆ. ಇದಕ್ಕಾಗಿಯೇ ವಿಶೇಷ ಸಂಸತ್ ಅಧಿವೇಶನ ಕರೆಯಲಾಗಿದೆ.

