ನವದೆಹಲಿ: 'ಆಡಳಿತದ ಆಲಸ್ಯ ಧೋರಣೆ, ಮೂಲಸೌಕರ್ಯ ಕೊರತೆಯ ಕಾರಣಕ್ಕಾಗಿ ದೇಶದ ಹೆದ್ದಾರಿಗಳು, ಎಕ್ಸ್ಪ್ರೆಸ್ವೇಗಳು ಸಾವಿನ ದಾರಿಗಳಾಗಬಾರದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಸ್ತೆ ಸುರಕ್ಷತೆಗಾಗಿ ದೇಶದಾದ್ಯಂತ ಜಾರಿ ಮಾಡುವಂತೆ ನ್ಯಾಯಾಲಯವೇ ಮಾರ್ಗಸೂಚಿಯನ್ನೂ ರೂಪಿಸಿದೆ.
'ಯಾರೋ ಒಬ್ಬರು ಇನ್ನೊಬ್ಬರ ಹತ್ಯೆ ಮಾಡಿದಾಗ ಮಾತ್ರವೇ 'ಜೀವಿಸುವ ಹಕ್ಕು' ಉಲ್ಲಂಘನೆಯಾಗುವುದಿಲ್ಲ. ಜನರು ಸುರಕ್ಷಿತವಾಗಿ ಜೀವಿಸುವ ವಾತಾವರಣ ಸೃಷ್ಟಿಸಬೇಕು ಎನ್ನುವುದೂ ಈ ಹಕ್ಕಿನ ಭಾಗವೇ ಆಗಿದೆ. ಈ ಜವಾಬ್ದಾರಿ ಸರ್ಕಾರಗಳ ಮೇಲಿದೆ' ಎಂದು ಜೆ.ಕೆ. ಮಾಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರ ಪೀಠ ಅಭಿಪ್ರಾಯಪಟ್ಟಿದೆ.
'ಭಾರತದಲ್ಲಿನ ಒಟ್ಟು ರಸ್ತೆಯ ಸಂಪರ್ಕ ವಿಸ್ತೀರ್ಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣವು ಶೇ 2ರಷ್ಟು ಮಾತ್ರ. ಆದರೆ, ದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಂಭವಿಸುವ ಒಟ್ಟು ಸಾವುಗಳ ಸಂಖ್ಯೆಯಲ್ಲಿ ಶೇ 30ರಷ್ಟು ಇಂಥ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಸಂಭವಿಸುತ್ತಿವೆ' ಎಂದು ಪೀಠ ಹೇಳಿದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ನೀಡಿ ಇದೇ 13ರಂದು ಪೀಠ ಆದೇಶಿಸಿದೆ.
'ಹೆದ್ದಾರಿಗಳಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸುವುದು ಮತ್ತು ಬ್ಲಾಕ್ಸ್ಪಾಟ್ಗಳಂಥ ಸಮಸ್ಯೆಗಳನ್ನು ಸರ್ಕಾರಗಳು ಪರಿಹರಿಸಬಹುದು. ಇಂಥ ಪರಿಹರಿಸಬಹುದಾದ ಸಮಸ್ಯೆಗಳಿಂದ ಒಂದು ಸಾವು ಸಂಭವಿಸುವುದೂ ಸರ್ಕಾರದ ವೈಫಲ್ಯ. ನಾವು ನೀಡಿದ ಮಾರ್ಗಸೂಚಿಗಳು ಪಾಲನೆ ಆಗುತ್ತಿವೆಯೇ ಇಲ್ಲವೇ ಎನ್ನುವ ಬಗ್ಗೆ ಆದೇಶ ಬಂದ 75 ದಿನಗಳ ಒಳಗಾಗಿ ಎಲ್ಲ ರಾಜ್ಯಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿ ನಮಗೆ ಸ್ಥಿತಿಗತಿ ವರದಿ ನೀಡಬೇಕು' ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಪೀಠ ಸೂಚಿಸಿದೆ.
ಪ್ರಕರಣವೇನು?: ರಾಜಸ್ಥಾನದ ಫಲೋದಿ ಮತ್ತು ತೆಲಂಗಾಣದ ರಂಗಾರೆಡ್ಡಿಯಲ್ಲಿ 2025ರ ನವೆಂಬರ್ 2 ಮತ್ತು 3ರಂದು ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 34 ಮಂದಿ ಮೃತಪಟ್ಟಿದ್ದರು. ಮೂಲಸೌಕರ್ಯಗಳ ಕೊರತೆ ಕಾರಣಕ್ಕೆ ಈ ಅಪಘಾತಗಳು ಸಂಭವಿಸಿದ್ದವು. ಈ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

