ಮುಂಬೈ: ಭಾರತೀಯ ವಿಮಾನಯಾನ ಕ್ಷೇತ್ರವು ತೀವ್ರ ಆರ್ಥಿಕ ಒತ್ತಡದಲ್ಲಿದ್ದು, ವಿಮಾನ ಹಾರಾಟಗಳನ್ನು ನಿಲ್ಲಿಸುವ ಅನಿವಾರ್ಯತೆಗೆ ಒಳಗಾಗಬಹುದು ಎಂದು ವಿಮಾನಯಾನ ಕಂಪೆನಿಗಳಾದ ಏರ್ ಇಂಡಿಯಾ, ಇಂಡಿಗೊ ಮತ್ತು ಸ್ಪೈಸ್ಜೆಟ್ ಸರಕಾರವನ್ನು ಎಚ್ಚರಿಸಿವೆ. ಈ ಪರಿಸ್ಥಿತಿಯಿಂದ ವಿಮಾನಯಾನ ಕ್ಷೇತ್ರವನ್ನು ಪಾರುಮಾಡಲು ವಿಮಾನ ಇಂಧನ ಬೆಲೆಯನ್ನು ತಕ್ಷಣ ಇಳಿಸಬೇಕು ಮತ್ತು ಹೆಚ್ಚುವರಿ ಆರ್ಥಿಕ ನೆರವನ್ನು ನೀಡಬೇಕು ಎಂದು ಅವು ಹೇಳಿವೆ.
ಪಶ್ಚಿಮ ಏಶ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ ಹಾಗೂ ವಾಯುಪ್ರದೇಶ ನಿರ್ಬಂಧಗಳಿಂದಾಗಿ, ಮುಖ್ಯವಾಗಿ ದೂರ ಪ್ರಯಾಣ ಮಾರ್ಗಗಳಲ್ಲಿ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳವಾಗಿದೆ.
ವಿಮಾನವೊದರ ನಿರ್ವಹಣಾ ವೆಚ್ಚದ ಸುಮಾರು 40 ಶೇಕಡ ಭಾಗ ಇಂಧನಕ್ಕಾಗಿ ತೆಗೆದಿಡಬೇಕಾಗುತ್ತದೆ.
ದೇಶಿಯ ಮತ್ತು ಅಂತರ್ರಾಷ್ಟ್ರೀಯ ಎರಡೂ ಹಾರಾಟಗಳಿಗೆ ಏಕರೀತಿಯ ಇಂಧನ ಬೆಲೆಯನ್ನು ನಿಗದಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಭಾರತೀಯ ವಿಮಾನಯಾನಗಳ ಒಕ್ಕೂಟ (ಎಫ್ಐಎ) ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದೆ. ಈ ಕ್ರಮವನ್ನು, 'ಕ್ರ್ಯಾಕ್ ಬ್ಯಾಂಡ್' ಸ್ಥಾಪನೆಯ ಮೂಲಕ ಹಿಂದೆಯೂ ತೆಗೆದುಕೊಳ್ಳಲಾಗಿತ್ತು ಎಂದು ಅವುಗಳು ಹೇಳಿವೆ.
ವಿಮಾನ ಇಂಧನ ಬೆಲೆಯಲ್ಲಿನ ಅಗಾಧ ಹೆಚ್ಚಳ ಹಾಗೂ ಕಚ್ಚಾ ತೈಲ ಮತ್ತು ವಿಮಾನ ಇಂಧನ ಬೆಲೆಗಳ ನಡುವಿನ ಅಗಾಧ ವ್ಯತ್ಯಾಸದಿಂದಾಗಿ ವಿಮಾನ ಹಾರಾಟಗಳನ್ನು ನಡೆಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಒಕ್ಕೂಟ ಹೇಳಿದೆ.
''ದೇಶಿ ಮತ್ತು ಅಂತರ್ರಾಷ್ಟ್ರೀಯಯಾನಗಳ ಇಂಧನಕ್ಕೆ ಭಿನ್ನ ಬೆಲೆಗಳನ್ನು ನಿಗದಿಪಡಿಸುವುದು ಅಥವಾ ಬೆಲೆಯಲ್ಲಿನ ಅತಾರ್ಕಿಕ ಏರಿಕೆಯು ವಿಮಾನಯಾನ ಸಂಸ್ಥೆಗಳು ಅನುಭವಿಸುತ್ತಿರುವ ಅಗಾಧ ನಷ್ಟಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ವಿಮಾನಯಾನಗಳನ್ನು ರದ್ದುಪಡಿಸುವ ಅನಿವಾರ್ಯತೆ ತಲೆದೋರಿದೆ'' ಎಂದು ಏರ್ ಇಂಡಿಯಾ, ಇಂಡಿಗೊ ಮತ್ತು ಸ್ಪೈಸ್ಜೆಟ್ಗಳನ್ನು ಒಳಗೊಂಡ ಒಕ್ಕೂಟ ಹೇಳಿದೆ.
''ವಿಮಾನಯಾನ ಸಂಸ್ಥೆಗಳು ಬದುಕುಳಿಯಲು ಮತ್ತು ಮುನ್ನಡೆಯಲು ಕೇಂದ್ರ ಸರಕಾರ ತುರ್ತಾಗಿ ಮಧ್ಯಪ್ರವೇಶಿಸಿ ಅರ್ಥಪೂರ್ಣ ಆರ್ಥಿಕ ನೆರವನ್ನು ಒದಗಿಸಬೇಕು'' ಎಂದು ಎಪ್ರಿಲ್ 26ರಂದು ಬರೆದ ಪತ್ರದಲ್ಲಿ ಒಕ್ಕೂಟ ಆಗ್ರಹಿಸಿದೆ.
ಕಳೆದ ತಿಂಗಳು, ಸರಕಾರ ದೇಶಿ ಹಾರಾಟದ ವಿಮಾನಗಳ ಇಂಧನ ಬೆಲೆ ಏರಿಕೆಯನ್ನು ಲೀಟರ್ಗೆ 15 ರೂಪಾಯಿಗೆ ಮಿತಿಗೊಳಿಸಿತ್ತು, ಆದರೆ, ಅಂತಾರಾಷ್ಟ್ರೀಯ ಹಾರಾಟದ ವಿಮಾನಗಳ ಇಂಧನದ ಬೆಲೆಯನ್ನು ಲೀಟರ್ಗೆ 73 ರೂ.ನಷ್ಟು ಹೆಚ್ಚಿಸಿತ್ತು.

