ಇಂಫಾಲ: ಜನಾಂಗೀಯ ಸಂಘರ್ಷದಿಂದ ತತ್ತರಿಸಿರುವ ಮಣಿಪುರದಲ್ಲಿ ಮಕ್ಕಳ ಹತ್ಯೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ಶನಿವಾರ ಘರ್ಷಣೆ ಸಂಭವಿಸಿದೆ. ಪ್ರತಿಭಟನಾಕಾರರು ಮುಖ್ಯಮಂತ್ರಿ ನಿವಾಸದತ್ತ ಕೈಗೊಂಡಿದ್ದ ಪಾದಯಾತ್ರೆಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ.
ಮಣಿಪುರ ಏಕತೆ ಕುರಿತ ಸಮನ್ವಯ ಸಮಿತಿ (ಕೋಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ ಇಂಟೆಗ್ರಿಟಿ) ಈ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರತಿಭಟನಾಕಾರರು ಸಿಎಂ ನಿವಾಸದತ್ತ ತೆರಳದಂತೆ ತಡೆಯಲು ಕಿಶಂಪೇಟೆ ಜಂಕ್ಷನ್, ಸಿಂಗಾಮಿ ಚಿಂಗಮಖಾಂಗ್, ಬಿಟಿ ರಸ್ತೆ, ಕೊನುಂಗ್ ಮಮಾಂಗ್ ಮತ್ತು ಕಂಗ್ಲಾದ ಪಶ್ಚಿಮ ಗೇಟ್ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು.
ಬ್ಯಾರಿಕೇಡ್ ಗಳನ್ನು ದಾಟುವ ಪ್ರಯತ್ನವನ್ನು ಪ್ರತಿಭಟನಾಕಾರರು ನಡೆಸಿದಾಗ ಖುರೈ, ನಾಗಂಪಾಲ್, ಕೊನುಂಗ್ ಮಮಾಂಗ್ ಮತ್ತು ಉರಿಪೋಕ್ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತು. ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳನ್ನು ಮತ್ತು ಹೊಗೆ ಬಾಂಬ್ಗಳನ್ನು ಸಿಡಿಸಿ ಗುಂಪನ್ನು ಚದುರಿಸುವ ಪ್ರಯತ್ನ ನಡೆಸಿದವು. ಸಂಘರ್ಷದಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.
ಬಳಿಕ ಸಮನ್ವಯ ಸಮಿತಿಯ ನಿಯೋಗಕ್ಕೆ ಸಿಎಂ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
ಮಾದಕವಸ್ತು-ಭಯೋತ್ಪಾದನೆ ಜತೆ ಸಂಬಂಧ ಹೊಂದಿರುವ ಕುಕಿ ಗುಂಪುಗಳ ಕೃತ್ಯವನ್ನು ತಡೆಯುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಭಟನಾಕಾರರು ಪ್ರಶ್ನಿಸಿದರು ಹಾಗೂ ಇತ್ತೀಚೆಗೆ ನಡೆದ ಮಕ್ಕಳ ಹತ್ಯೆಗೆ ಸಂಬಂಧಿಸಿದಂತೆ ನ್ಯಾಯ ಕೋರಿದರು ಎಂದು ತಿಳಿದು ಬಂದಿದೆ.

