ಕಠ್ಮಂಡು: ಜೆನ್ ಝೀಗಳ ಹೋರಾಟದ ಫಲವಾಗಿ ನೇಪಾಳದಲ್ಲಿ ಚುನಾವಣೆ ನಡೆದು, ಹೊಸ ಪ್ರಜಾಪ್ರಭುತ್ವ ಸರ್ಕಾರ ರಚನೆಗೊಂಡಿದೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತ, ರ್ಯಾಪರ್ ಬಾಲೇಂದ್ರ ಶಾ ದೇಶದ 47ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಇವರ ಸಂಪುಟದಲ್ಲಿ ಸಚಿವರಾದವರ ವಿದ್ಯಾರ್ಹತೆ ಕಂಡು ಇಡೀ ಜಗತ್ತೇ ಬೆರಗಾಗಿದೆ.
ಪ್ರಧಾನಿ ರ್ಯಾಪರ್, ಗೃಹ ಸಚಿವ ಡಿಜೆ ಎಂದು ಕೆಲ ನೆಟ್ಟಿಗರು ಅವರ ಮತ್ತು ನೇಪಾಳದ ನೂತನ ಸರ್ಕಾರದ ಕಾಲೆಳೆದಿದ್ದರು. ಆದರೆ ಇವರ ಸಂಪುಟದಲ್ಲಿರುವ 15 ಸಚಿವರು ಏನೆಲ್ಲಾ ಓದಿದ್ದಾರೆ, ಯಾವ ಪದವಿ ಪಡೆದಿದ್ದಾರೆ ಎಂಬುದು ಈಗ ಬಹು ಚರ್ಚಿತ ವಿಷಯವಾಗಿದೆ.
ಅತ್ಯಂತ ಕಿರಿಯ ವಯಸ್ಸಿನಲ್ಲೇ (35 ವರ್ಷ) ಪ್ರಧಾನಿಯಾದವರು ಎನ್ನುವ ಮೂಲಕ ಇತಿಹಾಸ ನಿರ್ಮಿಸಿರುವ ಬಾಲೇಂದ್ರ ಶಾ. ಇವರು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪದವಿಯನ್ನು ಕಠ್ಮಂಡುವಿನ ಹಿಮಾಲಯನ್ ವೈಟ್ಹೌಸ್ ಇಂಟರ್ನ್ಯಾಷನಲ್ ಕಾಲೇಜಿನಿಂದ ಪಡೆದಿದ್ದಾರೆ. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂ.ಟೆಕ್. ಪದವಿಯನ್ನು 2018ರಲ್ಲಿ ಪಡೆದಿದ್ದಾರೆ.
ದೇಶದ ವಿತ್ತ ಸಚಿವರಾಗಿರುವ ಡಾ. ಸ್ವಾಮಿಮ್ ವಾಗ್ಲೆ ಅವರು ಹಾರ್ವರ್ಡ್ನಲ್ಲಿ ಕಲಿತವರು. ಜತೆಗೆ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಹೊಂದಿದ್ದಾರೆ. ಇವರು ಈ ಸಂಪುಟದಲ್ಲಿ ಅತ್ಯಂತ ಹಿರಿಯರು. ಇವರ ವಯಸ್ಸು 52.
ಗೃಹ ಸಚಿವ ಸುಡಾನ್ ಗುರುಂಗ್ (30) ಅವರು ಪ್ರೌಢಶಾಲೆಯವರೆಗೂ ವ್ಯಾಸಂಗ ಮಾಡಿದ್ದಾರೆ. ನಂತರ ಸಂಗೀತ ಕ್ಷೇತ್ರಕ್ಕೆ ಇವರು ಪದಾರ್ಪಣೆ ಮಾಡಿದರು. 'ಹಮಿ ನೇಪಾಳ್' ಎಂಬ ಸಂಘಟನೆ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿದ್ದವರು.
ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಶಿಶಿರ್ ಖಾನಲ್ (47) ಅವರು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಕಾನೂನು ಮತ್ತು ನ್ಯಾಯಾಂಗ ವ್ಯವಹಾರಗಳ ಖಾತೆಯ ಸಚಿವೆಯಾಗಿರುವ ಶೋಬಿತಾ ಗೌತಮ್ (31) ಇವರು ಬಿ.ಎ, ಎಲ್ಎಲ್ಬಿ, ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಮೂಲಸೌಕರ್ಯ ಸಚಿವರಾಗಿರುವ ಸುನಿಲ್ ಲಾಮ್ಸಾಲ್ (34), ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಹಾಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
ಇಂಧನ ಮತ್ತು ನೀರು ಖಾತೆಯ ಸಚಿವರಾಗಿರುವ ವಿರಾಜ್ ಭಕ್ತ ಶ್ರೇಷ್ಠ (44) ಅವರು ಬಿಬಿಎ ವ್ಯಾಸಂಗ ಮಾಡಿದ್ದಾರೆ.
ಶಿಕ್ಷಣ ಖಾತೆಯ ಸಚಿವೆಯಾಗಿರುವ ಸಸ್ಮಿತಾ ಪೋಖರೇಲ್ (33) ಅವರು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಆರೋಗ್ಯ ಸಚಿವೆಯಾಗಿರುವ ನಿಶಾ ಮೆಹ್ತಾ (36) ಇವರು ಆರೋಗ್ಯ ನೀತಿ ವಿಷಯದಲ್ಲಿ ಎಂಎಸ್ಸಿ ಮತ್ತು ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಪ್ರವಾಸೋದ್ಯಮ ಖಾತೆ ಸಚಿವರಾಗಿರುವ ಗಣೇಶ್ ಪೌಡೆಲ್ (38) ಅವರು ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಸಾಮಾನ್ಯ ಆಡಳಿತ ಖಾತೆ ಸಚಿವೆಯಾಗಿರುವ ಪ್ರತಿಭಾ ರಾವಲ್ (32) ಅವರು ನರ್ಸಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಕಾರ್ಮಿಕ ಮತ್ತು ಸಾಮಾಜಿಕ ಭದ್ರತೆ ಖಾತೆಯ ಸಚಿವರಾಗಿರುವ ರಾಮ್ಜಿ ಯಾದವ್ (31) ಅವರು ಐಐಟಿ ಮದ್ರಾಸ್ನಿಂದ ಇಂಧನ ವ್ಯವಸ್ಥೆ ವಿಷಯ ಕುರಿತು ಎಂ.ಟೆಕ್. ಪದವಿ ಪಡೆದಿದ್ದಾರೆ.
ಈ ಖಾತೆಗೆ ಆರಂಭದಲ್ಲಿ ದೀಪಕ್ ಶಾ (40) ಅವರು ಸಚಿವರಾಗಿದ್ದರು. ಇವರು ಲಂಡನ್ ಸ್ಕೂಲ್ ಆಫ್ ಹೈಜಿನ್ ಸಂಸ್ಥೆಯಿಂದ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕೃಷಿ ಖಾತೆ ಸಚಿವರಾಗಿರುವ ಗೀತಾ ಚೌಧರಿ (35) ಇವರು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ.
ಮಹಿಳೆ ಮತ್ತು ಮಕ್ಕಳ ಖಾತೆ ಸಚಿವೆ ಸೀತಾ ಬದಿ (45) ಅವರು ಸಾಮಾಜಿಕ ಕಾರ್ಯ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.
ಸಂವಹನ ಖಾತೆ ಸಚಿವ ವಿಕ್ರಂ ತಿಮಾಲ್ಸಿನಾ (30) ಅವರು ಕಾನೂನು ಪದವಿಯನ್ನು ಹೊಂದಿದ್ದಾರೆ.
ಕಾರ್ಮಿಕ ಹಾಗೂ ಸಾಮಾಜಿಕ ಭದ್ರತೆ ಖಾತೆ ಸಚಿವ ದೀಪಕ್ ಕುಮಾರ್ ಅವರು ಸಚಿವರಾಗಿ ಮಾರ್ಚ್ 27ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಹುದ್ದೆಯನ್ನೇ ಕಳೆದುಕೊಂಡಿದ್ದಾರೆ.
ತಮ್ಮ ಹುದ್ದೆಯ ಪ್ರಭಾವ ಬೀರಿ ಪತ್ನಿಗೆ ಆರೋಗ್ಯ ವಿಮಾ ಮಂಡಳಿಯ ಹುದ್ದೆಗೆ ನೇಮಿಸಿದ ದೀಪಕ್ ಕುಮಾರ್ ವಿರುದ್ಧ ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷದ ಅಧ್ಯಕ್ಷೆ ರಾಬಿ ಲಾಮಿಚ್ಛಾನೆ ಆರೋಪಿಸಿ, ತಲೆದಂಡಕ್ಕೆ ಶಿಫಾರಸು ಮಾಡಿದ್ದರು. ಅಧಿಕಾರ ದುರುಪಯೋಗದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಬಾಲೇಂದ್ರ ಶಾ, ದೀಪಕ್ ಅವರನ್ನು ಏ. 10ರಂದು ವಜಾಗೊಳಿಸಿದ್ದಾರೆ.

