ನವದೆಹಲಿ: ಕಾಯ್ದಿರಿಸಿದ ತೀರ್ಪುಗಳನ್ನು ಮೂರು ತಿಂಗಳೊಳಗೆ ಪ್ರಕಟಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ವಿಳಂಬವು ದಾವೆದಾರರಿಗೆ ಸರಿಪಡಿಸಲಾಗದ ನಷ್ಟವನ್ನು ಉಂಟು ಮಾಡುತ್ತದೆ ಎಂದಿರುವ ನ್ಯಾಯಾಲಯ, ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೂ ಸೂಚಿಸಿದೆ.
ಹೈಕೋರ್ಟ್ ತೀರ್ಪನ್ನು ಅಪ್ಲೋಡ್ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠವು ಹೈಕೋರ್ಟ್ಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
'ಸುಪ್ರೀಂ' ನಿರ್ದೇಶನಗಳು
* ಜಾಮೀನು ಅರ್ಜಿಗಳ ಕುರಿತ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಅವುಗಳನ್ನು ಕಾಯ್ದಿರಿಸಿದ್ದರೆ ಮರುದಿನ ಪ್ರಕಟಿಸಿ, ಅಪ್ಲೋಡ್ ಮಾಡಬೇಕು
* ಜಾಮೀನು ಅಥವಾ ಶಿಕ್ಷೆಯ ಅಮಾನತು ಆದೇಶ ಪ್ರಕಟವಾದ ತಕ್ಷಣ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಮತ್ತು ವಿಚಾರಣಾದೀನ ಅಥವಾ ಶಿಕ್ಷೆಗೊಳಗಾದವರನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನ ಬಿಡುಗಡೆ ಮಾಡಬೇಕು
* ಆದೇಶ ಕಾಯ್ದಿರಿಸಿದ ನಾಲ್ಕು ತಿಂಗಳೊಳಗೆ ತೀರ್ಪು ಪ್ರಕಟಸದಿದ್ದರೆ, ಕಕ್ಷಿದಾರರು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನು ಸಂರ್ಪಕಿಸಿ, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೋರಬಹುದು
* ಮುಕ್ತ ನ್ಯಾಯಾಲಯದಲ್ಲಿ ತೀರ್ಪು ನೀಡಿದಾಗ, 24 ಗಂಟೆಗಳ ಒಳಗೆ ತೀರ್ಪನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು
ಸುಪ್ರೀಂ ಕೋರ್ಟ್ ನೀಡಿದ ಈ ನಿರ್ದೇಶನಗಳು ಯಾವುದೇ ನಿರ್ದಿಷ್ಟ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ತೀರ್ಪಿನ ಕುರಿತ ಆಕ್ಷೇಪಣೆಗಳಲ್ಲ ಎಂಬುದು ಪೀಠ ಸ್ಪಷ್ಟಪಡಿಸಿದೆ.

