ತೀರ್ಪು ಪ್ರಕಟಿಸುವಲ್ಲಿ ಆಗುವ ವಿಳಂಬವು ದಾವೆದಾರರಿಗೆ ತುಂಬಲಾರದ ನಷ್ಟ ಉಂಟುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶೀಘ್ರ ನಿರ್ಧಾರಗಳ ಅಗತ್ಯವನ್ನು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಜಾಮೀನು ಅರ್ಜಿಗಳನ್ನು ಆದರ್ಶಪ್ರಾಯವಾಗಿ ಅದೇ ದಿನ ನಿರ್ಧರಿಸಬೇಕು ಎಂದು ಹೇಳಿದೆ.
ಒಂದು ವೇಳೆ ಆದೇಶಗಳನ್ನು ಕಾಯ್ದಿರಿಸಿದರೆ, ಅವುಗಳನ್ನು ಮರುದಿನವೇ ಪ್ರಕಟಿಸಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದೆ.
ಜಾಮೀನು ಮಂಜೂರು ಮಾಡುವ ಅಥವಾ ಶಿಕ್ಷೆಯನ್ನು ಅಮಾನತುಗೊಳಿಸುವ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತತ್ಕ್ಷಣವೇ ತಿಳಿಸಬೇಕು. ಜೊತೆಗೆ, ವಿಚಾರಣಾಧೀನ ಕೈದಿ ಅಥವಾ ಅಪರಾಧಿಯನ್ನು ಆದ್ಯತೆಯ ಮೇರೆಗೆ ಅದೇ ದಿನ ಅಥವಾ ತಡವಾದರೆ ಮರುದಿನ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಚಲಾಯಿಸಿದ ಸುಪ್ರೀಂ ಕೋರ್ಟ್, ತೀರ್ಪಿನ ಕೇವಲ ಕಾರ್ಯಾಚರಣೆಯ ಭಾಗವನ್ನು ಮಾತ್ರ ಪ್ರಕಟಿಸಿದರೆ, ಅದಕ್ಕೆ ಕಾರಣಗಳನ್ನು ಒಳಗೊಂಡ ಸಂಪೂರ್ಣ ತೀರ್ಪನ್ನು 15 ದಿನಗಳೊಳಗೆ ಅಪ್ಲೋಡ್ ಮಾಡಬೇಕು ಎಂದು ಹೇಳಿದೆ.
ಆದೇಶವನ್ನು ಕಾಯ್ದಿರಿಸಿದ ನಾಲ್ಕು ತಿಂಗಳೊಳಗೆ ತೀರ್ಪು ಪ್ರಕಟವಾಗದಿದ್ದರೆ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಮುಕ್ತ ನ್ಯಾಯಾಲಯದಲ್ಲಿ ಸಕಾರಣ ತೀರ್ಪು ಪ್ರಕಟಿಸಿದಾಗ, ತೀರ್ಪನ್ನು 24 ಗಂಟೆಗಳೊಳಗೆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಪೀಠ ಹೇಳಿದೆ.
ತಾನು ನೀಡಿರುವ ನಿರ್ದೇಶನಗಳು ಯಾವುದೇ ನಿರ್ದಿಷ್ಟ ನ್ಯಾಯಾಧೀಶರು ಅಥವಾ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

