ತಿರುವನಂತಪುರ: 'ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಹಾಗೂ ಶಬರಿಮಲೆ ಚಿನ್ನ ಕಳವು ಪ್ರಕರಣವು ಬಿಜೆಪಿಗೆ ಮತವಾಗಿ ಪರಿವರ್ತನೆಯಾಗಲು ನೆರವಾಯಿತು' ಎಂದು ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
ಕೇರಳಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ.
ಮುರಳೀಧರನ್ ಅವರು ಕಳಕೂಟ್ಟಂ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಗಳಿಸಿದ್ದಾರೆ. ನೇಮಂ ಹಾಗೂ ಚಾತನ್ನೂರ್ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಮೊಳಗಿಸಿದೆ.
ಕಳಕೂಟ್ಟಂ ಕ್ಷೇತ್ರದಲ್ಲಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಮುರಳೀಧರನ್, 'ಕಳೆದ 10 ವರ್ಷಗಳಲ್ಲಿ ಎಲ್ಡಿಎಫ್ ಸರ್ಕಾರ, ಕುಡಿಯುವ ನೀರು ಹಾಗೂ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿಲ್ಲ' ಎಂದು ಆರೋಪಿಸಿದ್ದಾರೆ.
'ಇಲ್ಲಿ ಟೆಕ್ನೋಪಾರ್ಕ್ ನೆಲೆಗೊಂಡಿರುವುದರಿಂದ ತಿರುವನಂತಪುರ ಅಭಿವೃದ್ಧಿ ಯೋಜನೆಯಲ್ಲಿ ಕಳಕೂಟ್ಟಂ ಸಹ ಸೇರಿಸಬೇಕು. ಆದರೆ ಇಲ್ಲಿಯವರೆಗೆ ಅಂತಹ ಯಾವುದೇ ಪ್ರಯತ್ನಗಳು ನಡೆದಿಲ್ಲ' ಎಂದು ಹೇಳಿದ್ದಾರೆ.
ಕಡಕಂಪಳ್ಳಿ ಸುರೇಂದ್ರನ್ ಅವರನ್ನು 428 ಮತಗಳ ಅಂತರದಿಂದ ಸೋಲಿಸಿ ಮುರಳೀಧರನ್ ಜಯ ಗಳಿಸಿದರು. 'ಕಡಕಂಪಳ್ಳಿ ದೇವಸ್ವಂ ಸಚಿವರಾಗಿದ್ದಾಗ ನಡೆದ ಶಬರಿಮಲೆ ಚಿನ್ನ ಕಳವು ಪ್ರಕರಣವು ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಯಿತು' ಎಂದು ಅವರು ತಿಳಿಸಿದ್ದಾರೆ.

