ನವದೆಹಲಿ: ಲಿಪುಲೇಖ್ ಪಾಸ್ ಮೇಲೆ ನೇಪಾಳದ ಹಕ್ಕು ಮಂಡನೆಯನ್ನು ತಿರಸ್ಕರಿಸಿರುವ ಭಾರತವು ಅದು ಸಮರ್ಥನೀಯವಲ್ಲ ಎಂದು ಹೇಳಿದೆ. ಲಿಪುಲೇಖ್ ತನ್ನ ಭೂಪ್ರದೇಶವೆಂದು ಹೇಳಿಕೊಂಡಿರುವ ನೇಪಾಳವು ಅದರ ಮೂಲಕ ವಾರ್ಷಿಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿರೋಧಿಸಿದೆ.
ನೇಪಾಳದ 'ಭೂಪ್ರದೇಶವಾಗಿರುವ' ಲಿಪುಲೇಖ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯ ಕುರಿತು ಮಧ್ಯಮಗಳ ಪ್ರಶ್ನೆಗಳನ್ನು ತಾನು ಗಮನಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಈ ಪ್ರದೇಶದ ಕುರಿತು ಸರಕಾರದ ನಿಲುವು ಸ್ಪಷ್ಟ ಮತ್ತು ದೃಢವಾಗಿದೆ ಎಂದು ಪುನರುಚ್ಚರಿಸಿದೆ.
1816ರ ಸುಗೌಲಿ ಒಪ್ಪಂದದಂತೆ ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಂಪಿಯಾಧುರ,ಲಿಪುಲೇಖ್ ಮತ್ತು ಕಾಲಾಪಾನಿ ನೇಪಾಳದ ಅಖಂಡ ಭಾಗಗಳಾಗಿವೆ ಎಂದು ಹೇಳಿಕೆಯು ತಿಳಿಸಿದೆ.
ನೇಪಾಳದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು, ಭಾರತದ ನಿಲುವು ಸುಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. 1954ರಿಂದಲೂ ಲಿಪುಲೇಖ್ ಪಾಸ್ ಮಾರ್ಗವನ್ನು ಕೈಲಾಸ ಮಾನಸ ಸರೋವರ ಯಾತ್ರೆಗೆ ಬಳಸಲಾಗುತ್ತಿದೆ. ದಶಕಗಳಿಂದಲೂ ಯಾತ್ರೆಯು ಇದೇ ಮಾರ್ಗದ ಮೂಲಕ ನಡೆಯುತ್ತಿದೆ. ಇದೇನೂ ಹೊಸ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ನೇಪಾಲದ ಪ್ರಾದೇಶಿಕ ಹಕ್ಕು ಪ್ರತಿಪಾದನೆ ಕುರಿತು ಜೈಸ್ವಾಲ್, ಏಕಪಕ್ಷೀಯ ಭೂಪ್ರದೇಶದ ಕೃತಕ ವಿಸ್ತರಣೆಯ
ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ ಮತ್ತು ಐತಿಹಾಸಿಕ ಅಂಶಗಳು ಅಥವಾ ಪುರಾವೆಗಳ ಆಧಾರವನ್ನೂ ಹೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಗಡಿ ಸಮಸ್ಯೆಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳಲ್ಲಿಯ ಎಲ್ಲ ವಿಷಯಗಳನ್ನು ಬಗೆಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ತೊಡಗಿಕೊಳ್ಳಲು ತಾನು ಮಕ್ತವಾಗಿದ್ದೇನೆ ಎಂದು ಭಾರತವು ಸ್ಪಷ್ಟಪಡಿಸಿದೆ.

