ಬದಿಯಡ್ಕ: ಬರವಣಿಗೆಯ ಕ್ಷೇತ್ರದಲ್ಲಿ ಹಳೆ ಬೇರುಗಳನ್ನು ಗುರುತಿಸಿ, ಹೊಸ ಚಿಗುರುಗಳನ್ನು ನೀರೆರೆದು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮಹಿಳೆ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಬೇಕು ಎನ್ನುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ "ಮನಸ್ವಿನಿ ಮಹಿಳಾ ವೇದಿಕೆ" (ಮನೆ ಮನೆ ಸಾಹಿತ್ಯ) ಬದಿಯಡ್ಕ ಚುಳ್ಳಿಕಾನ ಇದರ ಉದ್ಘಾಟನಾ ಸಮಾರಂಭ ಹಾಗೂ ಭಾವಗಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಪ್ರಬುದ್ಧ ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ಇವರ ನಿವಾಸ "ನಿಸರ್ಗ-ಚುಳ್ಳಿಕಾನ" ದಲ್ಲಿ ಗುರುವಾರ ಜರಗಿತು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ಯು.ಮಹೇಶ್ವರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕತೆಗಾರ್ತಿ, ಸಾಹಿತಿ ಸ್ನೇಹಲತಾ ದಿವಾಕರ್ ಶುಭಾಶಂಸನೆಗೈದರು. ಸಾಹಿತಿ, ಕವಯಿತ್ರಿ ಸೀತಾಲಕ್ಷ್ಮಿ ವರ್ಮ ವಿಟ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಸಾಹಿತಿ, ಲೇಖಕಿ ಬಿ ಸತ್ಯವತಿ ಭಟ್ ಕೊಳಚಪ್ಪು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಕವಯಿತ್ರಿ ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆಗೈದು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಸಾಹಿತಿ ಲಕ್ಷ್ಮೀ ವಿ ಭಟ್ ಮಂಜೇಶ್ವರ ಸ್ವಾಗತಿಸಿ, ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ವಂದಿಸಿದರು. ಶಿಕ್ಷಕಿ ಹಾಗೂ ಕವಯಿತ್ರಿ ಸುಶೀಲಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರಿಗೂ ಕಿರಿಯರಿಗೂ ಸ್ಫೂರ್ತಿಯ ಚಿಲುಮೆಯಂತಿರುವ ಹಿರಿಯ ಸಾಹಿತಿಗಳಾದ ಬಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ಡಾ.ಯು.ಮಹೇಶ್ವರಿ ಇವರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮದ ದ್ಯೋತಕವಾಗಿ ಸ್ನೇಹಲತಾ ದಿವಾಕರ್, ಸೀತಾಲಕ್ಷೀ ವರ್ಮ ವಿಟ್ಲ ಮತ್ತು ಶ್ಯಾಮಲಾ ಸಂಪತ್ತಿಲ ಇವರುಗಳಿಗೆ ಗಿಡ ವಿತರಿಸಿ ಗೌರವಿಸಲಾಯಿತು.
ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸಾಹಿತ್ಯ ಪ್ರವರ್ತಕ, ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್, ಕವಿ ಸಾಹಿತಿ ಲತೀಶ್ ಸಂಕೋಳಿಗೆ ಹಾಗೂ ಹಿರಿಯ ಕಿರಿಯ ಸಾಹಿತ್ಯ ಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿಚಾರ ಸಂಕಿರಣ ನಡೆಯಿತು. ಮಹಿಳಾ ಸಬಲೀಕರಣ"ದ ಕುರಿತು ಡಾ.ಯು.ಮಹೇಶ್ವರಿ, ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಕುರಿತು ಸ್ನೇಹಲತಾ ದಿವಾಕರ್ ಹಾಗೂ "ಸ್ತ್ರೀ ಶಕ್ತಿ ಮಹಾಶಕ್ತಿ" ಎನ್ನುವ ವಿಷಯದ ಕುರಿತು ಸೀತಾಲಕ್ಷ್ಮಿ ವರ್ಮ ವಿಚಾರ ಮಂಡಿಸಿದರು.
ನಿರ್ಮಲಾ ಶೇಷಪ್ಪ ಪೆರ್ಲ, ಜ್ಯೋತ್ಸ್ನಾ ಕಡಂದೇಲು, ಸಂಧ್ಯಾ ಕೊರೆಕ್ಕಾನ, ಪ್ರಭಾವತಿ ಕೆದಿಲಾಯರ ಭಾವಗಾನ ಉದ್ಭಾಟನಾ ಕಾರ್ಯಕ್ರಮಕ್ಕೆ ರಂಗು ತುಂಬಿತು. ಆಯ್ದ ಕವಯಿತ್ರಿಗಳ ರಚನೆಗೆ ಶ್ಯಾಮಲ ಸಂಪತ್ತಿಲ ರಾಗ ಸಂಯೋಜಿಸಿದರು.
ಜ್ಯೋತ್ಸ್ನಾ ಕಡಂದೇಲು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು. ಬಿ ಸತ್ಯವತಿ ಭಟ್ ಕೊಳಚಪ್ಪು, ಲಕ್ಷ್ಮೀ ವಿ ಭಟ್ ಮಂಜೇಶ್ವರ, ಪ್ರಮೀಳಾ ಚುಳ್ಳಿಕಾನ, ನಿರ್ಮಲ ಶೇಷಪ್ಪ ಖಂಡಿಗೆ, ಶ್ಯಾಮಲಾ ಸಂಪತ್ತಿಲ, ಸುಶೀಲಾ ಪದ್ಯಾಣ, ಪ್ರಭಾವತಿ ಕೆದಿಲಾಯ, ಸಂಧ್ಯಾ ಕೊರೆಕ್ಕಾನ, ಸೌಮ್ಯ ಪ್ರವೀಣ್, ಡಾ.ಯು.ಮಹೇಶ್ವರಿ, ಸ್ನೇಹಲತಾ ದಿವಾಕರ್, ಸೀತಾಲಕ್ಷ್ಮಿ ವರ್ಮ ವಿಟ್ಲ ಕವನ ವಾಚಿಸಿದರು. ರಾಷ್ಟ್ರಗೀತೆಯೊಂದಿಗೆ ಸಾಹಿತ್ಯ ಕಾರ್ಯಕ್ರಮ ಸಂಪನ್ನಗೊಂಡಿತು.

.jpg)

