ಬೆಂಗಳೂರು: ದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ನ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಮೆರಿಕಾದ ಎಂಎಸ್ಡಿ ಇಂಡಿಯಾ ಹಾಗೂ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಸಹಯೋಗದಲ್ಲಿ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ.
ಗರ್ಭಕಂಠ ಕ್ಯಾನ್ಸರ್ ಎಂಬುದು ಕ್ಯಾನ್ಸರ್ನ ಒಂದು ವಿಧವಾಗಿದೆ.
ಇದನ್ನು ಆರಂಭಿಕವಾಗಿ ಪತ್ತೆ ಹಚ್ಚಿದರೆ ಗುಣಮುಖವಾಗುವ ಸಾಧ್ಯತೆಯೂ ಇದೆ. ಆದರೆ ಮಹಿಳೆಯರಲ್ಲಿನ ಜಾಗೃತಿಯ ಕೊರತೆ, ವೈದ್ಯರೊಂದಿಗೆ ಕಾಯಿಲೆಯ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳದಿರುವುದು ಹಾಗೂ ಕೌಟುಂಬಿಕ ಹಿನ್ನಲೆಯಿಂದಾಗಿ ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆ ಮೃತಪಡುತ್ತಿದ್ದಾರೆ.
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವುದು ಹಾಗೂ ಅದರ ಚಿಕಿತ್ಸೆಗೆ ಸಂಬಂಧಿಸಿದ ಸರಳವಾದ ಭಾಷೆಯಲ್ಲಿ ಅರ್ಥವಾಗುವ ಮಾದರಿಯಲ್ಲಿ ಚಿಕ್ಕ ವಿಡಿಯೋವೊಂದನ್ನು ಸಿದ್ದಪಡಿಸಲಾಗಿದೆ. ಈ ವಿಡಿಯೋವನ್ನು ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಿಂದಾಗಿ ಗರ್ಭಕಂಠ ಕ್ಯಾನ್ಸರ್ ಬಗೆಗಿನ ಮಾಹಿತಿ ತಿಳಿಯಲಿದೆ.
ಎಂಎಸ್ಡಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬ್ರೆಕ್ಟ್ ವ್ಯಾನ್ನೆಸ್ಟೆ ಪ್ರತಿಕ್ರಿಯಿಸಿ , 'ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಗರ್ಭಕಂಠ ಕ್ಯಾನ್ಸರ್ನ ಆದ್ಯತೆಯಾಗಿದೆ. ವೈದ್ಯರೊಂದಿಗೆ ಮುಕ್ತವಾಗಿ ಮಾತನಾಡುವುದು ಕೂಡ ಮುಖ್ಯ' ಎಂದಿದ್ದಾರೆ.
'ಎಲ್ಲರ ಆರೋಗ್ಯವನ್ನು ಕಾಳಜಿ ಮಾಡುವುದರ ನಡುವೆ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಡುತ್ತಾರೆ. ಈ ಅಭಿಯಾನದಲ್ಲಿ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಕುರಿತಾದ ಸಂಪೂರ್ಣ ಜಾಗೃತಿ ಸಿಗಲಿದೆ. ಮಾತ್ರವಲ್ಲದೆ, ಈ ಅಭಿಯಾನದ ಮೂಲಕ ಮಹಿಳೆಯರು ವೈದ್ಯರೊಂದಿಗೆ ಮುಕ್ತವಾಗಿ ಗರ್ಭಕಂಠ ಕ್ಯಾನ್ಸರ್ ಕುರಿತು ಮಾತನಾಡುವಂತಾಗಲಿ ಎಂದು ಆಶಿಸುತ್ತೇನೆ' ಎಂದು ನಟಿ ಮಾಧುರಿ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ.

