ಹಮೀರ್ಪುರ: ಉತ್ತರಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಶುಕ್ರವಾರ ಕುಸಿದು ಬಿದ್ದ ಪರಿಣಾಮ ಆರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
'ಮುಂಜಾನೆ ಮೂರು ಗಂಟೆಗೆ ಅವಘಡ ನಡೆದಿದೆ. ಬೆಟ್ವಾ ನದಿಯಲ್ಲಿ ಬಿರುಗಾಳಿ ಬೀಸಿದ ಕಾರಣ, ಸೇತುವೆಯ ನಿರ್ಮಾಣದ ಕಾರ್ಮಿಕರು ಮಲಗಿದ್ದ ಸ್ಲ್ಯಾಬ್ ಕುಸಿದು ಬಿದ್ದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಎರಡು ವರ್ಷಗಳಿಂದ ಖಾಸಗಿ ಕಂಪನಿಯು ಸೇತುವೆ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದೆ. ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ಇರುವ ಬಗ್ಗೆ ಜಿಲ್ಲಾಡಳಿತ ಗುರುವಾರವೇ ಮುನ್ಸೂಚನೆ ನೀಡಿತ್ತು' ಎಂದು ಪೊಲೀಸರು ಹೇಳಿದ್ದಾರೆ.

