ನವದೆಹಲಿ: 'ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕ್ರಮವಹಿಸಿ ದೊಡ್ಡ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಈ ವಿಚಾರದಲ್ಲಿ ಯುಪಿಎಸ್ಸಿಯನ್ನು ನೋಡಿ ಕಲಿಯುವುದು ಅಗತ್ಯವಾಗಿದೆ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಕಾರಣದಿಂದಾಗಿ 'ನೀಟ್-ಯುಜಿ' ರದ್ದು ಮಾಡಿರುವುದಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಅಲೋಕ್ ಆರಾಧೆ ಅವರು ಇದ್ದ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.
'ಹಲವು ದಶಕಗಳಿಂದ ಯುಪಿಎಸ್ಸಿ ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಇಂತಹ ಸನ್ನಿವೇಶ ಎದುರಿಸಿಲ್ಲ. ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿ ಯುಪಿಎಸ್ಸಿ ನೋಡಿ ನೀವು ಕಲಿಯಬೇಕು' ಎಂದು ಎನ್ಟಿಎ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿ ನರಸಿಂಹ ಹೇಳಿದರು.
'ಕೇಂದ್ರ ಸರ್ಕಾರಕ್ಕೆ ಯುವ ಜನರ ಭವಿಷ್ಯದ ಬಗ್ಗೆ ಕಾಳಜಿ ಇದೆ. ನೀಟ್-ಯುಜಿ ಮರುಪರೀಕ್ಷೆಯನ್ನು ಯಾವುದೇ ದೋಷವಿಲ್ಲದೇ ನಡೆಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಇಂತಹ ಲೋಪಗಳಿಗೆ ಸಂಬಂಧಿಸಿ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಸ್ಥೆಗೆ ಹೊಣೆಗಾರಿಕೆ ನಿಗದಿ ಮಾಡದ ಹೊರತು ನಿಜವಾದ ಸಮಸ್ಯೆ ಬಗೆಹರಿಯುವುದಿಲ್ಲ' ಎಂದು ಹೇಳಿತು.
ಆಗ, 'ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಪರೀಕ್ಷೆ ವೇಳೆ ಇಂತಹ ಯಾವ ಲೋಪಗಳು ಸಂಭವಿಸದಂತೆ ನೋಡಿಕೊಳ್ಳಲು ಕೆಲ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ' ಎಂದು ಮೆಹ್ತಾ ಅವರು ಪೀಠಕ್ಕೆ ಅರುಹಿದರು. ಈ ಕುರಿತಂತೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠವು, ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.
'ಶಿಫಾರಸು ಜಾರಿಯಾದರೂ ಲೋಪ ಏಕೆ?': ಕೋರ್ಟ್ ರಚಿಸಿದ್ದ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷರೂ ಆದ ಇಸ್ರೊ ಮಾಜಿ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್ ಅವರು ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು.
'ನೀಟ್ ಸುಧಾರಣೆಗಾಗಿ ಸಮಿತಿಯು ಹಲವು ಸಲಹೆಗಳನ್ನು ನೀಡಿದ್ದರೂ ಹೊಸ ವಿವಾದಗಳು ಹೇಗೆ ಹುಟ್ಟಿಕೊಳ್ಳುತ್ತಿವೆ' ಎಂದು ಪೀಠ ಅವರನ್ನು ಉದ್ದೇಶಿಸಿ ಕೇಳಿತು.
'ಸಮಿತಿಯ ಶಿಫಾರಸುಗಳ ಹೊರತಾಗಿಯೂ ಈ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಹೇಗಾಯಿತು? ಉನ್ನತಾಧಿಕಾರ ಸಮಿತಿ ಇದ್ದ ಮೇಲೂ ಈ ಘಟನೆ ನಡೆದಿದೆ ಎಂದರೆ, ಸಮಿತಿ ಮಾಡಿರುವ ಶಿಫಾರಸಿನಲ್ಲಿ ದೋಷ ಇರಬೇಕು ಇಲ್ಲವೇ ಶಿಫಾರಸುಗಳನ್ನು ಸರಿಯಾಗಿ ಜಾರಿ ಮಾಡಿರಲಿಕ್ಕಿಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿತು.
'ನೀಟ್ ಸುಧಾರಣೆಗೆ ಸಂಬಂಧಿಸಿ ಸಮಿತಿಯು 35 ದೀರ್ಘಾವಧಿ ಹಾಗೂ 60 ಅಲ್ಪಾವಧಿ ಶಿಫಾರಸುಗಳನ್ನು ಮಾಡಿತ್ತು. ಇವುಗಳ ಪೈಕಿ ಬಹುತೇಕ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ಡಾ.ರಾಧಾಕೃಷ್ಣನ್, ಪೀಠಕ್ಕೆ ತಿಳಿಸಿದರು.
'ಕೆಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಆಗಿದ್ದನ್ನು ಬಿಟ್ಟರೆ ಕಳೆದ ವರ್ಷ ನೀಟ್-ಪಿಜಿ ತೃಪ್ತಿಕರವಾಗಿಯೇ ನಡೆದಿದೆ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಲೋಪಗಳಿಂದಾಗಿ 'ನೀಟ್-ಯುಜಿ'ಯನ್ನು ಮತ್ತೆ ನಡೆಸಲಾಗುತ್ತಿದ್ದು, ಪರೀಕ್ಷೆಯನ್ನು ಯಾವುದೇ ದೋಷಗಳು ಇಲ್ಲದಂತೆ ನಡೆಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದೂ ಅವರು ತಿಳಿಸಿದರು.
ಎನ್ಟಿಎ ಅನ್ನು ವಿಸರ್ಜಿಸಬೇಕು ಇಲ್ಲವೇ ಪುನರ್ರಚಿಸಬೇಕು ಎಂದು ಕೋರಿ ಯುನೈಟೆಡ್ ಡಾಕ್ಟರ್ಸ್ ಫ್ರಂಟ್ (ಯುಡಿಎಫ್), ಅಖಿಲ ಭಾರತ ವೈದ್ಯಕೀಯ ಸಂಘಗಳ ಮಹಾ ಒಕ್ಕೂಟ (ಎಫ್ಎಐಎಂಎ) ಅರ್ಜಿ ಸಲ್ಲಿಸಿವೆ.
-ಸುಪ್ರೀಂ ಕೋರ್ಟ್ಪ್ರಶ್ನೆಪತ್ರಿಕೆ ಸೋರಿಕೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಅವರ ಕುಟುಂಬಗಳಿಗೂ ಆಘಾತಕಾರಿ ವಿಷಯ. ದೇಶದ ಯುವಜನತೆಯನ್ನು ನಾವು ಈ ರೀತಿ ನಿರಾಶೆಗೊಳಿಸಬಾರದು

