ಸೋಮವಾರ ಸಂಜೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, "ಇಂದಿನಿಂದ ಬಂಗಾಳದ ಭವಿಷ್ಯಕ್ಕೆ ಹೊಸ ಅಧ್ಯಾಯ ಆರಂಭವಾಗಿದೆ.
ಭಯದಿಂದ ಮುಕ್ತವಾದ ರಾಜ್ಯ ಈಗ ಅಭಿವೃದ್ಧಿಯ ವಿಶ್ವಾಸದಿಂದ ತುಂಬಿದೆ. 'ಬಾಂಗ್ಲಾಯ್ ಪೊರಿಬೋರ್ತನ್ ಹೊಯೆಚೆ' (ಬಂಗಾಳದಲ್ಲಿ ಬದಲಾವಣೆ ಬಂದಿದೆ)" ಎಂದು ಹೇಳಿದರು.
ಬಿಜೆಪಿಯ ಈ ವಿಜಯವನ್ನು ಬಂಗಾಳದ ಜನತೆಗೆ ಅರ್ಪಿಸಿದ ಪ್ರಧಾನಿ, "ಪವಿತ್ರ ಬಂಗಾಳದ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ" ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಎರಡು ಪ್ರಮುಖ ಭರವಸೆಗಳನ್ನು ಅವರು ನೀಡಿದರು, ಒಳನುಸುಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಕೇಂದ್ರದ ಆರೋಗ್ಯ ಯೋಜನೆಯನ್ನು ತಕ್ಷಣ ಜಾರಿಗೆ ತರುವುದು.
ವಿಜಯ ಭಾಷಣದ ವೇಳೆ ಪ್ರಧಾನಿ ಮೋದಿ ಧರಿಸಿದ್ದ ಬಂಗಾಳಿ ಶೈಲಿಯ ಉಡುಪು ವಿಶೇಷ ಗಮನ ಸೆಳೆಯಿತು. ಬಿಳಿ ಪಂಜಾಬಿ (ಕುರ್ತಾ) ಮತ್ತು ಕೆಂಪು ಅಂಚಿನ ರೇಷ್ಮೆ ಧೋತಿ ಧರಿಸಿದ್ದ ಅವರು, ಬಂಗಾಳದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿತ್ತು. ಧೋತಿಯ ತುದಿಯನ್ನು ಕುರ್ತಾ ಜೇಬಿನೊಳಗೆ ಹಾಕಿಕೊಂಡಿರುವ ಶೈಲಿ ಹಾಗೂ ಕುತ್ತಿಗೆಯ ಸುತ್ತ ಹತ್ತಿಯ ಶಾಲ್ ಧರಿಸಿದ್ದು ವಿಶೇಷವಾಗಿದ್ದವು.
ರಾಜ್ಯದಲ್ಲಿ ದಾಖಲೆ ಮಟ್ಟದ ಮತದಾನ ಪ್ರಮಾಣ ಕಂಡುಬಂದಿರುವುದನ್ನು ಪ್ರಧಾನಿ ಶ್ಲಾಘಿಸಿದರು. "ಸ್ವಾತಂತ್ರ್ಯಾನಂತರ ಯಾವುದೇ ರಾಜ್ಯದಲ್ಲಿ ಕಂಡಿರದ ಮಟ್ಟದ ಮತದಾನ ಇದಾಗಿದೆ. ತಳಮಟ್ಟದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಕೊಡುಗೆ ಗಮನಾರ್ಹ. ನೀವು ಹೊಸ ಇತಿಹಾಸ ನಿರ್ಮಿಸಿದ್ದೀರಿ" ಎಂದು ಹೇಳಿದರು.
ತಮಿಳುನಾಡಿನಲ್ಲಿ ನಟ ವಿಜಯ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ ಅವರು, ಅಸ್ಸಾಂನಲ್ಲಿ ಬಿಜೆಪಿಯ ಗೆಲುವನ್ನೂ ಉಲ್ಲೇಖಿಸಿದರು. "ಇಂದು ಹಲವು ರೀತಿಯಲ್ಲಿ ವಿಶೇಷ ದಿನ. ಇದು ದೇಶಕ್ಕೆ ಉಜ್ವಲ ಭವಿಷ್ಯದ ಸೂಚನೆ. ಭಾರತದ ಮಹಾನ್ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಡಿ, ಕಾರ್ಯಕ್ಷಮತೆಯ ರಾಜಕೀಯದಲ್ಲಿ ನಂಬಿಕೆ ಇಡಿ ಹಾಗೂ 'ಏಕ್ ಭಾರತ್ ಶ್ರೇಷ್ಠ ಭಾರತ್' ತತ್ವವನ್ನು ಬಲಪಡಿಸಿ," ಎಂದು ಕರೆ ನೀಡಿದರು.

