ಬದಿಯಡ್ಕ: ಬೆಳಿಂಜಗುತ್ತು ಪುನರ್ ಪ್ರತಿಷ್ಠೆ ಮತ್ತು ತರವಾಡು ಮನೆಯ ಪ್ರವೇಶೋತ್ಸವ, ಬ್ರಹ್ಮಕಲಶದಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಾಲಕೃಷ್ಣ ಆಳ್ವ ಅರಂಬೂರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡಿದರು. ಬಂಟರ ಸಂಘ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಕುಂಬ್ಡಾಜೆ ಪಂಚಾಯತಿ ಉಪಾಧ್ಯಕ್ಷ ರವೀಂದ್ರ ರೈ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉದ್ಯಮಿ ಹರಿಪ್ರಸಾದ್ ರೈ ಪುತ್ರಕಳ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತರವಾಡಿಗೆ ಬೇಕಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು. ರವೀಂದ್ರನಾಥ ಶೆಟ್ಟಿ ಸಸಿಹಿತ್ಲು ಸ್ವಾಗತಿಸಿ, ದಯಾನಂದ ರೈ ಕಳುವಾಜೆ ವಂದಿಸಿದರು. ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವದ ಕೋಲ, ಕೊರತಿ ದೈವದ ಕೋಲ, ಪಟ್ಟದ ಬೀರ್ಣಾಳ್ವ ದೈವದ ನೇಮ ನಡೆಯಿತು.
ಗುರುವಾರ ಅಪರಾಹ್ನ ಶ್ರೀ ರಕ್ತೇಶ್ವರಿ ದೈವದ ನೇಮ, ಸಂಜೆ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನಾ ಸಂಕೀರ್ತನೆ, ರಾತ್ರಿ ಪೊಟ್ಟನ್ ದೈವದ ಕೆಂಡಸೇವೆ ನಡೆಯಿತು. ಶುಕ್ರವಾರ ಧರ್ಮದೈವ ಧೂಮಾವತಿ ನೇಮ, ಗುಳಿದ ದೈವದ ಕೋಲ ನಡೆಯಿತು.

.jpg)
.jpg)
