ಕಾಸರಗೋಡು: ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಸರಸ್ವತಿ ಮಂಟಪದಲ್ಲಿ ನಡೆಯುತ್ತಿರುವ ಸರಣಿ ಭಜನಾ ಕಾರ್ಯಕ್ರಮದಲ್ಲಿ ಕಳೆದ ಐದಾರು ದಿವಸಗಳಿಂದ ಸಾಕು ನಾಯಿಯೊಂದು ಭಜನೆ ಆಲಿಸುತ್ತಿರುವುದು ಭಕ್ತಾದಿಗಳಲ್ಲಿ ಕೌತುಕ ಮೂಡಿಸಿದೆ. ಪ್ರೇಕ್ಷಕ ವೃಂದದ ಸಾಲಿನ ಮಂದಿಯ ಕಾಲಬುಡದಲ್ಲಿ ಕುಳಿತು ಯಾರಿಗೂ ಸಮಸ್ಯೆ ಉಂಟಾಗದ ರೀತಿಯಲ್ಲಿ ಪ್ರತಿ ದಿನ ಈ ಶ್ವಾನ ಭಗವಂತನ ಹಾಡುಗಳನ್ನು ಕೇಳುತ್ತಾ ಕಾಲಕಳೆಯುತ್ತಿರುವುದು ಜನರಲ್ಲಿ ಅಚ್ಛರಿಗೆ ಕಾರಣವಾಗಿದೆ.
ಶ್ರೀಕೃಷ್ಣ ಪರಮಾತ್ಮ ಕೊಳಲಗಾಯನ ಮಾಡಿದಾಗ ಗೋವುಗಳೆಲ್ಲ ಮಂತ್ರಮುಗ್ಧವಾಗುತ್ತಿದ್ದುದನ್ನು ನಾವು ಕಥಾನಕಗಳಲ್ಲಿ ಕೇಳಿದ್ದೇವೆ. ನಾರದ, ತುಂಬುರರು ಹಾಡಿದಾಗ ಪ್ರಕೃತಿಯೇ ಮೋಡಿಗೊಳಗಾಗುತ್ತಿದ್ದ ವರ್ಣನೆಯನ್ನು ಆಲಿಸಿದ್ಧೇವೆ. ಆದರೆ ಇಷ್ಟ ಬದ್ಧತೆಯಿಂದ ಭಜನೆ ಆಲಿಸುವ ಶ್ವಾನವೊಂದರ ಆಸಕ್ತಿ ಬಹಳ ವಿರಳ. ಶ್ರೀ ಕ್ಷೇತ್ರ ಕಾಳ್ಯಂಗಾಡು ಭಜನೆ, ಸಂಕೀರ್ತನೆಗಳಿಗೂ ತುಂಬ ಮಹತ್ವ ನೀಡುವ ತಾಣವಾಗಿದ್ದು, ತನ್ನ ಪುಟ್ಟ ವಯಸ್ಸಿನಲ್ಲೇ ಭಕುತಿಯ ಹಾಡುಗಳನ್ನು ಕೇಳುತ್ತಾ ಬೆಳೆದ ಈ ನಾಯಿ, ಈ ಬಗೆಗಿನ ಆಸಕ್ತಿಯನ್ನು ಜೀವನದುದ್ದಕ್ಕೂ ತೋರ್ಪಡಿಸುತ್ತಿರಬೇಕೆಂದು ಭಕ್ತಾದಿಗಳು ಆಡಿಕೊಳ್ಳುತ್ತಿದ್ದಾರೆ.



