ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) ಮರುಮೌಲ್ಯಮಾಪನ ಪೋರ್ಟಲ್ನ ಪಾವತಿ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆದಿದ್ದು, ಸುಮಾರು 50 ವಿದ್ಯಾರ್ಥಿಗಳು ಅನಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.
'ಪೋರ್ಟಲ್ ಅನ್ನು ಹಾಕ್ ಮಾಡಲಾಗಿದೆ. ಈ ಪಾವತಿ ವ್ಯವಸ್ಥೆಯು ಎಚ್ಡಿಎಫ್ಸಿ ಬ್ಯಾಂಕ್ಗೆ ಸಂಬಂಧಿಸಿದ್ದಾಗಿತ್ತು.
ಪೋರ್ಟಲ್ ಸಾರ್ವಜನಿಕ ಬಳಕೆಗೆ ಮುಕ್ತವಾದಾಗ ಇದು ಸಂಭವಿಸಿದೆ' ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ಸಮಸ್ಯೆಯಿಂದಾಗಿ ಪೋರ್ಟಲ್ನಲ್ಲಿ ಶುಲ್ಕದ ಬಗ್ಗೆಯೂ ವ್ಯತ್ಯಾಸವಾಗಿದೆ. ಕೆಲ ಸಂದರ್ಭಗಳಲ್ಲಿ, ಪಾವತಿಸಬೇಕಾದ ಮೊತ್ತವು ₹1ರಿಂದ ₹68 ಸಾವಿರದವರೆಗೆ ಏರಿಳಿತವಾಗಿದೆ.
'ವಿನೋದಕ್ಕಾಗಿ ಅಥವಾ ದುರುದ್ದೇಶದಿಂದ ಮೊದಲು ₹1 ತೋರಿಸಿ ನಂತರ ₹67 ಸಾವಿರದಿಂದ ₹68 ಸಾವಿರ ತೋರಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಸಮಯದವರೆಗೆ ಪೋರ್ಟಲ್ ಕಾರ್ಯನಿರ್ವಹಿಸುತ್ತಿರಲಿಲ್ಲ ಎನಿಸುತ್ತದೆ. ಪೋರ್ಟಲ್ಗೆ ಲಾಗಿನ್ ಆದ 50 ವಿದ್ಯಾರ್ಥಿಗಳ ಮೊತ್ತಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಅವರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್ಗಳಾದ ಎಸ್ಬಿಐ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಅನ್ನು ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ.
'ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರದ ತಜ್ಞರು ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಕಾರ್ಪೊರೇಷನ್ ಆಫ್ ಇಂಡಿಯಾ ಜತೆಗೂಡಿ ಪರಿಶೀಲಿಸುತ್ತಿದ್ದು, ಪೋರ್ಟಲ್ ಮತ್ತು ಪಾವತಿ ಗೇಟ್ವೇಯನ್ನು ಬಲಪಡಿಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಸಿಬಿಎಸ್ಇ ವಿವಾದ: ಸಿಬಿಐ ತನಿಖೆಗೆ ಆಗ್ರಹ
'ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು' ಎಂದು ಕಾಂಗ್ರೆಸ್ ಶನಿವಾರ ಒತ್ತಾಯಿಸಿದೆ. 'ಪರೀಕ್ಷೆಯ ಯೋಜನೆ ಹಾಗೂ ಅನುಷ್ಠಾನದಲ್ಲಿ ಅಸಮರ್ಥತೆ ಭ್ರಷ್ಟಾಚಾರ ಮತ್ತು ಉದಾಸೀನತೆಯ ಆಶ್ಚರ್ಯಕರ ಮಿಶ್ರಣ ಕಂಡುಬಂದಿದೆ' ಎಂದು ಆರೋಪಿಸಿದೆ.
ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ಹಾಗೂ ದಿನಪತ್ರಿಕೆಯೊಂದು ನಡೆಸಿದ ಎರಡು ತನಿಖೆಗಳ ಬಗ್ಗೆ ಗಮನ ಸೆಳೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 'ಇವು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್ಎಂ) ವ್ಯವಸ್ಥೆಯನ್ನು ಪರಿಚಯಿಸುವಲ್ಲಿ ಸಿಬಿಎಸ್ಇಯ ಉದ್ದೇಶ ಮತ್ತು ಸನ್ನದ್ಧತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ' ಎಂದು ಹೇಳಿದ್ದಾರೆ.
'ಈ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಅವರೇ ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಹೀಗಾಗಿ ಆ ಸಮಸ್ಯೆಯ ಕುರಿತು ಪ್ರಧಾನಿಯವರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ತರ ಬಯಸುತ್ತಿದ್ದಾರೆ' ಎಂದು ರಮೇಶ್ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ 10 ಪ್ರಶ್ನೆಗಳನ್ನು ಕೇಳಿದ್ದಾರೆ.
'ಬೋರ್ಡ್ ಪರೀಕ್ಷೆಗಳಿಗೆ 74 ದಿನಗಳು ಇರುವಾಗ ಸಿಬಿಎಸ್ಇ ಒಎಸ್ಎಂ ವ್ಯವಸ್ಥೆಯನ್ನು ಜಾರಿಗೆ ತರಲು ಏಕೆ ಅಷ್ಟೊಂದು ಪಟ್ಟು ಹಿಡಿದಿತ್ತು? ದೆಹಲಿಯ ಐದು ಶಾಲೆಗಳಲ್ಲಿ ನಡೆಸಿದ ಒಎಸ್ಎಂ ವ್ಯವಸ್ಥೆಯ ಪ್ರಾಯೋಗಿಕ ಪರಿಶೀಲನೆ ವೇಳೆ ತಾಂತ್ರಿಕ ಕಾರ್ಯಾಚರಣೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಕನಿಷ್ಠ 36 ಸಮಸ್ಯೆಗಳನ್ನು ಸಿಬಿಎಸ್ಇ ಗುರುತಿಸಿತ್ತು. ಬೋರ್ಡ್ ಪರೀಕ್ಷೆಗಳಿಗೂ ಮೊದಲು ಈ ಸಮಸ್ಯೆಗಳನ್ನು ಏಕೆ ಪರಿಹರಿಸಲಿಲ್ಲ' ಎಂದು ಪ್ರಶ್ನಿಸಿದ್ದಾರೆ.
-ಅರವಿಂದ್ ಕೇಜ್ರಿವಾಲ್, ಎಎಪಿ ರಾಷ್ಟ್ರೀಯ ಸಂಚಾಲಕನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ. ದೇಶದ ಶಿಕ್ಷಣ ವ್ಯವಸ್ಥೆಯು ಮಾಫಿಯಾದ ಹಿಡಿತದಲ್ಲಿ ಸಿಲುಕಿದೆ.

