ದೂರು ದಾಖಲಾದ ಬಳಿಕ, ಈವರೆಗೆ 4.28 ಕೋಟಿ ರೂಪಾಯಿ ಮೊತ್ತವನ್ನು ಸ್ಥಗಿತಗೊಳಿಸಿರುವುದಾಗಿ ದಿಲ್ಲಿ ಪೊಲೀಸ್ ನ ವಿಶೇಷ ಸೈಬರ್ ಅಪರಾಧ ತನಿಖಾ ಘಟಕವಾದ 'ಇಂಟಲಿಜನ್ಸ್ ಫ್ಯೂಶನ್ ಆಯಂಡ್ ಸ್ಟ್ರಾಟಜಿಕ್ ಆಪರೇಶನ್ಸ್' (IFSO) ಹೇಳಿದೆ.
''ನರೇಶ್ ಗುಜ್ರಾಲ್ ರ ದೂರಿನಂತೆ ಜೂನ್ 16ರಂದು FIR ದಾಖಲಾಯಿತು. ತಕ್ಷಣ ಕಾರ್ಯಾಚರಣೆ ನಡೆದು ಒಟ್ಟು ವಂಚಿತ ಮೊತ್ತ 7.68 ಕೋಟಿ ರೂ. ಪೈಕಿ 4.28 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಗಳಲ್ಲಿ ಸ್ಥಗಿತಗೊಳಿಸಲಾಯಿತು. ವಂಚನೆಯಲ್ಲಿ ಶಾಮೀಲಾದ ವ್ಯಕ್ತಿಗಳನ್ನು ಬಂಧಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ'' ಎಂದು ಉಪ ಪೊಲೀಸ್ ಕಮಿಶನರ್ (IFSO) ವಿನೀತ್ ಕುಮಾರ್ ತಿಳಿಸಿದರು.
ವಂಚನೆಯು ಜೂನ್ 12 ಮತ್ತು 16ರ ನಡುವೆ ನಡೆಯಿತು. ವಂಚಕರು ನರೇಶ್ ಗುಜ್ರಾಲ್ ರ ವಾಟ್ಸ್ಆಯಪ್ ಖಾತೆಗೆ ಕನ್ನ ಹಾಕಿ ತಮ್ಮನ್ನು ನರೇಶ್ ಗುಜ್ರಾಲ್ ರಂತೆ ಬಿಂಬಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಚಾರ್ಟರ್ಡ್ ಅಕೌಂಟಂಟ್ ಪದವಿ ಹೊಂದಿರುವ ನರೇಶ್ 2007ರಿಂದ 2022ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.
ನರೇಶ್ ದಿಲ್ಲಿಯ ಓಖ್ಲಾದಲ್ಲಿ ಬಟ್ಟೆ ಮತ್ತು ಚರ್ಮ ಉತ್ಪಾದಕ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ. ವಂಚಕರು ನರೇಶ್ ಗುಜ್ರಾಲ್ ರ ವಾಟ್ಸ್ಆಯಪ್ ಖಾತೆಗೆ ಕನ್ನ ಹಾಕಿರುವುದು ತನಿಖೆಯಿಂದ ಗೊತ್ತಾಗಿದೆ.
ಜೂನ್ 12ರಂದು ಕಂಪೆನಿಯ CFO ಶುಭಮ್ ಸಿಂಗ್ ರಿಗೆ ನರೇಶ್ ರ ಪ್ರೊಫೈಲ್ ಚಿತ್ರ ಇರುವ ಸಂಖ್ಯೆಯೊಂದರಿಂದ ವಾಟ್ಸ್ಆಯಪ್ ಸಂದೇಶ ಬಂದಿತ್ತು. RTGS ಮೂಲಕ ಬೃಹತ್ ಮೊತ್ತದ ಹಣವನ್ನು ವರ್ಗಾಯಿಸುವಂತೆ ಸಿಂಗ್ ಗೆ ಸೂಚಿಸಲಾಗಿತ್ತು.
ಅದನ್ನು ನಂಬಿದ ಸಿಂಗ್ ನಾಲ್ಕು RTGS ವ್ಯವಹಾರಗಳ ಮೂಲಕ 7.68 ಕೋಟಿ ರೂ. ಮೊತ್ತವನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು.
ಏನೋ ಎಡವಟ್ಟಾಗಿದೆ ಎಂದು ಕೊಂಡ ಸಿಂಗ್ ಅವರು, ನರೇಶ್ ಗುಜ್ರಾಲ್ ರ ಮಗಳಿಗೆ ವಿಷಯವನ್ನು ತಿಳಿಸಿದರು. ಅವರು ತಂದೆಯನ್ನು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

