ಹೈದರಾಬಾದ್: 80 ದಿನಗಳಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸುವಷ್ಟು ಕಲ್ಲಿದ್ದಲು ಸಂಗ್ರಹವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ.ಕಿಶನ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.
2014ರಿಂದ ಎನ್ಡಿಎ ಸರ್ಕಾರ ಸಾಧಿಸಿರುವ ಸಾಧನೆಗಳ ಕುರಿತು ಮಾಧ್ಯಮಗಳೊಂದಿಗೆ ಕಿಶನ್ ರೆಡ್ಡಿ ಮಾತನಾಡಿದ್ದಾರೆ.
ಈ ವೇಳೆ, 'ಈ ಹಿಂದೆ ಕಲ್ಲಿದ್ದಲು ಕೊರತೆ ಇತ್ತು. ಆದರೆ, ಈಗ ಕೇಂದ್ರ ಸರ್ಕಾರವು 80 ದಿನಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲು ಸಂಗ್ರಹ ಹೊಂದಿದೆ. ಮಂಗಾರು ಶುರುವಾಗಿರುವ ಕಾರಣ ಕಲ್ಲಿದ್ದಲು ಉತ್ಪಾದನೆಯಲ್ಲಿ ಅಡಚಣೆ ಉಂಟಾಗಬಹುದು. ಹೀಗಾಗಿ ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಕಲ್ಲಿದ್ದಲು ಸಂಗ್ರಹವನ್ನು ನಾವು ಖಾತರಿಪಡಿಸಿಕೊಂಡಿದ್ದೇವೆ' ಎಂದಿದ್ದಾರೆ.
ಅರ್ಜೆಂಟೀನಾದಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಖನಿಜ ನಿಕ್ಷೇಪಗಳ ಕುರಿತೂ ಮಾತನಾಡಿ, 'ನಿಕ್ಷೇಪಗಳಲ್ಲಿನ ಶೋಧವನ್ನು ಈಗಾಗಲೇ ಆರಂಭಿಸಲಾಗಿದೆ. ಶೀಘ್ರವೇ ಉತ್ಪಾದನೆಯನ್ನೂ ಆರಂಭಿಸಲಾಗುವುದು. ಕೆಲವು ನಿರ್ಣಾಯಕ ಖನಿಜ ನಿಕ್ಷೇಪಗಳನ್ನೂ ಕೇಂದ್ರ ಸರ್ಕಾರ ಗುರುತಿಸುತ್ತಿದ್ದು, ಶೀಘ್ರವೇ ಶೋಧ ಕಾರ್ಯಾಚರಣೆ ಕೈಗೊಳ್ಳಲಿದೆ' ಎಂದೂ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಶೋಧ ಪೂರ್ಣಗೊಂಡಿರುವ ಪ್ರದೇಶಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಸಂಸ್ಕರಿಸಿದ, ಅರೆ ಸಂಸ್ಕರಿಸಿದ ನಿರ್ಣಾಯಕ ಖನಿಜಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಪಾಲುದಾರರಿಗೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ನಡೆಯುತ್ತಿದ್ದ ಹಗರಣಗಳು ಸುದ್ದಿಯಾಗುತ್ತಿದ್ದವು. ಆದರೆ, ಈಗ ವಾರ್ಷಿಕವಾಗಿ 1.040 ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸುವ ಮೂಲಕ ದೇಶ ಸುದ್ದಿಯಲ್ಲಿದೆ ಎಂದೂ ರೆಡ್ಡಿ ಪ್ರತಿಪಾದಿಸಿದರು.

