ಸುರಂಗದ ಅಂತಿಮ ಸ್ಫೋಟಕ್ಕೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಂಡಿ ಒತ್ತಿ ಚಾಲನೆ ನೀಡಿದರು.
ಆ ಮೂಲಕ ಅತ್ಯಂತ ಸವಾಲಿನ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಐತಿಹಾಸಿಕ ಕ್ಷಣಕ್ಕೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಸೇರಿದಂತೆ ನೂರಾರು ಕಾರ್ಮಿಕರು ಸಾಕ್ಷಿಯಾದರು.
13.153 ಕಿಲೋಮೀಟರ್ ಉದ್ದದ ಈ ಸುರಂಗವು ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್ನ ಬಾಲ್ಟಾಲ್ನಿಂದ ಲಡಾಖ್ನ ದ್ರಾಸ್ನಲ್ಲಿರುವ ಮೀನಮಾರ್ಗ್ಗೆ ಸಂಪರ್ಕ ಕಲ್ಪಿಸುತ್ತದೆ. ಸಮುದ್ರ ಮಟ್ಟದಿಂದ 11,575 ಅಡಿ ಎತ್ತರದಲ್ಲಿ ಹಾದುಹೋಗುವ ಈ ಕಾಮಗಾರಿ 2020ರಲ್ಲಿ ಆರಂಭಗೊಂಡಿತು. ಎರಡೂ ಕಡೆಗಳಿಂದ ಏಕಕಾಲದಲ್ಲಿ ಸುರಂಗ ಕೊರೆಯುವ ಕೆಲಸ ನಡೆಯುತ್ತಿತ್ತು. 3 ಸಾವಿರ ಕಾರ್ಮಿಕರು ಸತತ ಆರು ವರ್ಷಗಳ ಕೆಲಸ ಮಾಡಿ ಕಾಮಗಾರಿ ಮುಗಿಸಿದ್ದಾರೆ.
ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ವಿಶ್ವದ ಅತಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಅತಿ ಉದ್ದದ ಏಕ-ಕೊಳವೆ ಹಾಗೂ ದ್ವಿಮುಖ ರಸ್ತೆಯಾಗಿದೆ. ಕಾಮಗಾರಿ ವೇಳೆ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನ (ಎನ್ಎಟಿಎಂ) ಅಳವಡಿಸಲಾಗಿದ್ದು, ಬದಲಾಗುವ ಶಿಲಾಸ್ತರಗಳು ಮತ್ತು ಭೌಗೋಳಿಕ ಅನಿಶ್ಚಿತತೆಗಳಿಗೆ ಇದು ಹೊಂದಿಕೊಳ್ಳಲಿದೆ.
ಮುಖ್ಯ ಸುರಂಗದ ಜೊತೆಗೆ ಸಂಪರ್ಕ ರಸ್ತೆಗಳು, ಸೇತುವೆಗಳು, ಹಿಮರಕ್ಷಣೆ ವ್ಯವಸ್ಥೆಗಳು, ಕಟ್-ಅಂಡ್-ಕವರ್ ವಿಭಾಗಗಳು ಹಾಗೂ ಇತರೆ ಸುರಂಗ ಮೂಲಸೌಕರ್ಯಗಳ ನಿರ್ಮಾಣವೂ ಯೋಜನೆಯ ಭಾಗವಾಗಿದೆ. ಸುರಂಗದ ಒಳಭಾಗದ ಲೈನಿಂಗ್, ವಿದ್ಯುತ್-ಯಾಂತ್ರಿಕ ವ್ಯವಸ್ಥೆಗಳು ಹಾಗೂ ಇತರೆ ಅಂತಿಮ ಕಾಮಗಾರಿಗಳು ಮುಂದಿನ ಹಂತದಲ್ಲಿ ನಡೆಯಲಿವೆ.
ಸರ್ವಋತು ಸಂಪರ್ಕ: ಚಳಿಗಾಲದ ವೇಳೆ ಭಾರಿ ಹಿಮಪಾತದಿಂದ ಶ್ರೀನಗರ ಮತ್ತು ಲೇಹ್, ಲಡಾಖ್ ನಡುವೆ ಸಂಪರ್ಕ ವ್ಯವಸ್ಥೆ ಸ್ಥಗಿತವಾಗುತ್ತಿತ್ತು. ಈ ಸುರಂಗದ ಮೂಲಕ ಸರ್ವಋತು ಸಂಪರ್ಕ ಕಲ್ಪಿಸಲಿದೆ. ಇದರಿಂದ, ಪ್ರವಾಸೋದ್ಯಮ, ವ್ಯಾಪಾರ, ಅಗತ್ಯ ಸೇವೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ವ್ಯವಸ್ಥೆಗೆ ಮಹತ್ತರ ಉತ್ತೇಜನ ಸಿಗಲಿದೆ. ಚೀನಾ ಗಡಿಭಾಗಕ್ಕೆ ಭೂಮಾರ್ಗದ ಮೂಲಕ ಸೈನಿಕರು, ಸರಕು ರವಾನೆಗೂ ನೆರವಾಗಲಿದೆ.
ಯೋಜನೆಯ ಪ್ರಮುಖ ಅಂಶಗಳು
ಸುರಂಗದ ಉದ್ದ: 13.153 ಕಿ.ಮೀ.
ಒಟ್ಟು ಯೋಜನಾ ಉದ್ದ: 30.894 ಕಿ.ಮೀ.
ಸ್ಥಳ: ಬಾಲ್ಟಾಲ್ನಿಂದ ಮೀನ್ಮಾರ್ಗ್ಗೆ ಸಂಪರ್ಕ
ಉದ್ದೇಶ: ಶ್ರೀನಗರ-ಲಡಾಖ್ ನಡುವೆ 365 ದಿನ ಸಂಪರ್ಕ
ಯೋಜನೆ ಆರಂಭ: ಅಕ್ಟೋಬರ್ 1, 2020
ಸುರಂಗದಲ್ಲಿ ಮೊದಲ ಸ್ಫೋಟ: ಅಕ್ಟೋಬರ್ 14, 2020
ಸುರಂಗದ ಕೊನೆಯ ಸ್ಫೋಟ: ಜೂನ್ 9, 2026
ಝೋಜಿಲಾ ಸುರಂಗ ಮಾರ್ಗದ ಮುಂದೆ ನಿಂತ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮುಖ್ಯಮಂತ್ರಿ ಒಮರ್ ಅಬ್ದುಲ್ಲ-ಪಿಟಿಐ ಚಿತ್ರ
ಚೆನಾನಿ-ನಾಸಾರಿ ನಡುವೆ ಹೊಸ ಸುರಂಗಕ್ಕೆ ಅನುಮೋದನೆ
ಜಮ್ಮು: 'ಉಧಂಪುರವನ್ನು ರಂಬನ್ ಜಿಲ್ಲೆಯೊಂದಿಗೆ ಸಂಪರ್ಕಿಸುವ ಚೆನಾನಿ-ನಾಸಾರಿ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಸುರಂಗ ಮಾರ್ಗಕ್ಕೆ ಸಮನಾಂತರವಾಗಿ ಎರಡು ಹೊಸ ಕೊಳವೆ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
'ಈ ಬೆಳವಣಿಗೆಯು ಉಧಂಪುರದ ಪಾಲಿಗೆ ಮತ್ತೊಂದು ಶುಭ ಸುದ್ದಿಯಾಗಿದೆ' ಎಂದು ಸಿಂಗ್ ಬಣ್ಣಿಸಿದ್ದಾರೆ. 'ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸಿದ್ದು ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯ ಒತ್ತಡವನ್ನು ಪ್ರಸ್ತಾವಿತ ಮಾರ್ಗವು ಮತ್ತಷ್ಟು ಕಡಿಮೆ ಮಾಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

