ನವದೆಹಲಿ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು(ಜೂನ್ 6) ಸಂಜೆ 5 ಗಂಟೆಯೊಳಗೆ ರಾಜೀನಾಮೆ ನೀಡದಿದ್ದರೆ ಮುಂದಿನ ವಾರಾಂತ್ಯದಲ್ಲಿ ಮತ್ತೊಂದು ಪ್ರತಿಭಟನೆ ಮಾಡುವ ಮೂಲಕ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಶಪಥ ಮಾಡಿದ್ದಾರೆ.
ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿಯು(ಸಿಜೆಪಿ) ಜಂತರ್ ಮಂತರ್ನಲ್ಲಿ ಶನಿವಾರ(ಜೂನ್ 6) ಪ್ರತಿಭಟನೆ ಮಾಡಿತು. ನೂರಾರು ವಿದ್ಯಾರ್ಥಿಗಳು ಹಾಗೂ ಹಲವಾರು ಪೋಷಕರು ಭಾಗವಹಿಸಿದ್ದರು.
ಅಭಿಜೀತ್ ದೀಪ್ಕೆ ಅವರು ಬೋಸ್ಟನ್ನಿಂದ ವಿಮಾನದ ಮೂಲಕ ಆಗಮಿಸಿ, ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಹೋರಾಟಗಾರ ಸೋನಮ್ ವಾಂಗ್ಚುಕ್ ಆಗಮಿಸಿ, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
'ಕಾಕ್ರೋಚ್' ಪ್ರತಿಭಟನೆಗೆ ಸೋನಮ್ ವಾಂಗ್ಚುಕ್ ಬೆಂಬಲ: ಜಂತರ್ ಮಂತರ್ಗೆ ಭೇಟಿ
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್ಇ ಒಎಸ್ಎಂ ವಿವಾದಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಮುಂದಿನ ಶನಿವಾರ ತಾವು ಮತ್ತೆ ಬೀದಿಗಿಳಿಯುವುದಾಗಿ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ವೇಳೆ ಮಾತನಾಡಿದ ದೀಪ್ಕೆ, 'ನಿಮ್ಮಲ್ಲಿ ಯಾರೆಲ್ಲಾ ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೀರಿ ಎಂದು ನಾನು ಕೇಳಲು ಬಯಸುತ್ತೇನೆ. ಈ ಪ್ರತಿಭಟನೆ ಕೊನೆಗೊಳ್ಳಬೇಕೆಂದು ನೀವು ಬಯಸುತ್ತೀರಾ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಾವು ಇಲ್ಲಿಯೇ ಕುಳಿತುಕೊಳ್ಳಬೇಕು ಎಂದು ನೀವು ಭಾವಿಸುತ್ತೀರಾ? ನಿಮ್ಮೆಲ್ಲರ ಪರವಾಗಿ ನಾನು ಹೋರಾಟ ಮಾಡುತ್ತೇನೆ. ಅವರು ರಾಜೀನಾಮೆ ನೀಡದಿದ್ದರೆ ನಾವು ದೇಶಾದ್ಯಂತ ಪ್ರತಿಭಟನೆಯನ್ನು ವಿಸ್ತರಿಸುತ್ತೇವೆ' ಎಂದು ಹೇಳಿದ್ದಾರೆ.
ನಾನು ಬಂಧನಕ್ಕೊಳಗಾಗಬಹುದು ಎಂದು ನನ್ನ ತಾಯಿ ಹೆದರಿದ್ದರು ಮತ್ತು ನಾನು ಅಮೆರಿಕಗೆ ಹೊರಟಾಗ ಅತ್ತಿದ್ದಕ್ಕಿಂತ ನಾನು ಇಲ್ಲಿಗೆ ಮರಳಿ ಬಂದಾಗ ಹೆಚ್ಚು ಅತ್ತರು. ಇದು ಕೇವಲ ನನ್ನ ತಾಯಿಯ ಭಯವಲ್ಲ, ರಾಜಕೀಯದ ಬಗ್ಗೆ ಮಾತನಾಡುವ ಯಾವುದೇ ಯುವಕನ ಪೋಷಕರ ಭಯವಾಗಿದೆ. ನಾವು ಎಷ್ಟು ದಿನ ಭಯದಲ್ಲಿ ಬದುಕಬೇಕು? ನಮಗೆ ಭಯವಿಲ್ಲ ಎಂದು ನೀವು ಅವರಿಗೆ ಹೇಳಬೇಕು ಎಂದು ಹೇಳಿದ್ದಾರೆ.
'ಸ್ನೇಹಿತರೇ, ಇದು ಸುದೀರ್ಘ ಹೋರಾಟವಾಗಿದೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ, ಆದರೆ ಈ ವ್ಯಕ್ತಿಗಳು ಎಷ್ಟು ನಿರ್ಲಜ್ಜರಾಗಿದ್ದಾರೆ ಎಂದರೆ ಕ್ರಮ ಕೈಗೊಳ್ಳುವ ಬದಲು, ನಮ್ಮ ಖಾತೆಗಳನ್ನು ಹ್ಯಾಕ್ ಮಾಡುವುದು ಮತ್ತು ನಮ್ಮ ಪೋಸ್ಟ್ಗಳನ್ನು ಡಿಲೀಟ್ ಮಾಡುವುದರಂತಹ ಕೆಲಸ ಮಾಡುತ್ತಿದ್ದಾರೆ. ಗಮನ ಬೇರೆಡೆಗೆ ಸೆಳೆಯುವ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ನಮ್ಮ ಪೋಸ್ಟ್ಗಳನ್ನು ಡಿಲೀಟ್ ಮಾಡಲು ನಿಮಗೆ ಸಾಧ್ಯವಾಗಬಹುದು, ಆದರೆ ಈ ಜಾಗದಿಂದ ನಮ್ಮನ್ನು ಅಳಿಸಲು ನಿಮಗೆ ಸಾಧ್ಯವಿಲ್ಲ' ಎಂದು ಕಿಡಿಕಾರಿದ್ದಾರೆ.
ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐನ ಅನ್ನಿ ರಾಜಾ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘನೆಗಳ ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

