ನವದೆಹಲಿ: ದೇಶದ ಮಹಿಳೆಯರು, ಮಕ್ಕಳಲ್ಲಿನ ಅಪೌಷ್ಠಿಕತೆ, ರಕ್ತಹೀನತೆ ಕುರಿತು ಎನ್ಎಫ್ಎಚ್ಎಸ್-6ರ ದತ್ತಾಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ್ದ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, 'ಅರೆಬರೆ ಜ್ಞಾನವು ಅಪಾಯಕಾರಿ' ಎಂದಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿರುವ ಸಚಿವ, 'ಮೋದಿ ಸರ್ಕಾರದಲ್ಲಿ ದೇಶದ ಆರೋಗ್ಯ ಸೂಚಕಗಳು ಉತ್ತಮವಾಗಿವೆ. ರಾಜಕೀಯ ಮಾಡುವುದಕ್ಕಾಗಿ ಸಮೀಕ್ಷೆಯಲ್ಲಿನ ದತ್ತಾಂಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡು ಖರ್ಗೆ ಅವರು ಮಾತನಾಡಿದ್ದಾರೆ' ಎಂದು ದೂರಿದ್ದಾರೆ.
'ಯುಪಿಎ (2005-06) ಅವಧಿಯಲ್ಲಿದ್ದ ಶೇಕಡ 43.9ರಷ್ಟಿದ್ದ ತಾಯಿಯ ಆರೋಗ್ಯ ಸೂಚಕಗಳು ಈಗ ಶೇ 76.2ರಷ್ಟಕ್ಕೆ ತಲುಪಿವೆ. ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗಿವ ಪ್ರಕರಣಗಳ ಸಂಖ್ಯೆ ಶೇ 38.7ರಿಂದ ಶೇ 90.6ಕ್ಕೆ ಏರಿಕೆಯಾಗಿವೆ. ಹೆರಿಗೆ ಮಾಡಿಸುವ ಕೌಶಲಯುಕ್ತ ಸಿಬ್ಬಂದಿಗಳ ಪ್ರಮಾಣವು ಶೇ 46.6ರಿಂದ ಶೇ 91.3ಕ್ಕೆ ಏರಿಕೆಯಾಗಿದೆ' ಎಂದಿದ್ದಾರೆ.
'ಎನ್ಎಫ್ಎಚ್ಎಸ್-3ರ (2005-06) ಹೋಲಿಕೆಯಲ್ಲಿ ಎನ್ಎಫ್ಎಚ್ಎಸ್-6ರಲ್ಲಿ ಚುಚ್ಚುಮದ್ದು ನೀಡುವ ಪ್ರಮಾಣವು ಶೇ 87.1ಕ್ಕೆ ಏರಿಕೆಯಾಗಿದೆ. ಆರೋಗ್ಯ ವಿಮೆ ಪ್ರಮಾಣವು ಶೇ 4.9ರಷ್ಟರಿಂದ ಶೇ 60.2ರಷ್ಟಕ್ಕೆ ಏರಿಕೆಯಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ಬಳಿಕೆಯು ಶೇ 79.2ರಷ್ಟಕ್ಕೆ ಏರಿಕೆಯಾಗಿದೆ. ಮಕ್ಕಳ ಕುಂಠಿತ ಬೆಳವಣಿಗೆ ದರವು ಶೇ 48.0ರಷ್ಟಿಂದ ಶೇ 29.3ರಷ್ಟಕ್ಕೆ ಇಳಿಕೆಯಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

