ಉದಯಪುರ: 'ದೇಶದ ಏಳಿಗೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ದೇಶದ ಒಳಗೆ ಮತ್ತು ಹೊರಗೆ ಹಲವು ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಿ, ಹಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.
'ದೇಶದ ಪ್ರಗತಿಯನ್ನು ವಿರೋಧಿಸುವವರ ಬಳಿ ಹೆಚ್ಚಿನ ಜನರಿದ್ದಾರೆ. ಪ್ರಾಬಲ್ಯ ಹಾಗೂ ಹಣವಿದೆ. ಆದರೆ ದೇಶದ ಜನರು ಸಾಂಪ್ರದಾಯಕ ಮೌಲ್ಯಗಳ ಬಲದ ಮೇಲೆ ಒಗ್ಗಟ್ಟಿನಿಂದ ನಿಲ್ಲಬೇಕು' ಎಂದು ಕರೆ ನೀಡಿದ್ದಾರೆ.
ಮಹಾರಾಣ ಪ್ರತಾಪ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಭಾರತ ಏಳಿಗೆ ತಡೆಯಲು ಹಲವು ಮಂದಿ ಪ್ರಯತ್ನಿಸುತ್ತಿದ್ದಾರೆ. ಸುಳ್ಳುಗಳನ್ನು ಹಬ್ಬಿಸುವುದೂ ಸೇರಿದಂತೆ ಜನರ ಹಾದಿತಪ್ಪಿಸಲು ಅನೇಕ ಕುತಂತ್ರಗಳನ್ನು ಮಾಡಲಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ತಮ್ಮ ಸ್ವಾರ್ಥ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗದ ಜನರು ದೇಶವು ಪ್ರಗತಿ ಕಾಣದಂತೆ ಪಿತೂರಿ ನಡೆಸುತ್ತಿದ್ದಾರೆ. ಸುಳ್ಳು ನಿರೂಪಣೆ ಸೃಷ್ಟಿಸಿ ಹರಡಲಾಗುತ್ತಿದೆ. ದಾರಿ ತಪ್ಪಿಸಲು ಅನೇಕ ಕುತಂತ್ರಗಳನ್ನು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.
'ಇಂತಹ ಸಂಕುಚಿತಗಳನ್ನು ಮೀರಿ ಜನರು ಒಗ್ಗಟ್ಟಾಗಿರಬೇಕು. ಏಕತಗೆಗಾಗಿ ಸಾಮರಸ್ಯ ಹಾಗೂ ಪರಸ್ಪರ ಗೌರವದ ಅಗತ್ಯವಿದೆ. ಭಾರತದ ಏಳಿಗೆಯು ಬರೀ ಅದರ ಹಿತಾಸಕ್ತಿಗಷ್ಟೇ ಅಲ್ಲ, ಜಾಗತಿಕ ಹಿತಾಸಕ್ತಿಗೆ ಮುಖ್ಯ' ಎಂದು ಪ್ರತಿಪಾದಿಸಿದ್ದಾರೆ.

