ನವದೆಹಲಿ / ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರವು ಶೇ 5.1ಕ್ಕೆ ಹೆಚ್ಚಳವಾಗಬಹುದು ಎಂದು ಆರ್ಬಿಐ ಅಂದಾಜಿಸಿದೆ. ಈ ಮೊದಲು ಶೇ 4.6ರಷ್ಟಾಗಲಿದೆ ಎಂದು ಹೇಳಿತ್ತು.
ಆದರೂ, ಚಿಲ್ಲರೆ ಹಣದುಬ್ಬರವು ಆರ್ಬಿಐನ ಸಹಿಷ್ಣುತಾ ಮಟ್ಟವಾದ ಶೇ 2ರಿಂದ ಶೇ 6ರ ನಡುವೆಯೇ ಇದೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ಆಗಿದೆ. ಇದರಿಂದ ದೇಶದ ರಿಟೇಲ್ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದ್ದು, ತಯಾರಿಕಾ ವೆಚ್ಚ ಏರಿಕೆಯಾಗಿದೆ. ಇದು ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ.
ಮೇ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರವು ಕ್ರಮವಾಗಿ ಶೇ 7.4 ಮತ್ತು ಶೇ 8.4ರಷ್ಟು ಹೆಚ್ಚಳವಾಗಿದೆ. ಇದು ನೇರವಾಗಿ ಚಿಲ್ಲರೆ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದ್ದು, ಶೇ 0.36ರಷ್ಟು ಹಣದುಬ್ಬರ ಹೆಚ್ಚಳವಾಗಲಿದೆ ಎಂದು ಹೇಳಿದೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರದಲ್ಲಿನ ಹೆಚ್ಚಳ, ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾ ವಸ್ತುಗಳು, ರಾಸಾಯನಿಕಗಳು, ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದು ಮುಂದಿನ ದಿನ ಗಳಲ್ಲಿ ಮತ್ತಷ್ಟು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿದೆ.
ಚಿಲ್ಲರೆ ಹಣದುಬ್ಬರವು ಪ್ರಸಕ್ತಆರ್ಥಿಕ ವರ್ಷದ ಮೊದಲತ್ರೈಮಾಸಿಕದಲ್ಲಿ ಶೇ 4.2, ಎರಡನೇ ತ್ರೈಮಾಸಿಕದಲ್ಲಿ ಶೇ 5.1, ಮೂರನೇ ತ್ರೈಮಾಸಿಕದಲ್ಲಿ ಶೇ 5.9 ಮತ್ತು ನಾಲ್ಕನೇ ತ್ರೈಮಾಸಿಕ ದಲ್ಲಿ ಶೇ 5.4ರಷ್ಟಾಗಲಿದೆ ಎಂದು ಅಂದಾಜಿಸಿದೆ. 2026-27ರಲ್ಲಿ ಕೋರ್ ಹಣದುಬ್ಬರವು ಶೇ 4.7ರಷ್ಟಾಗಲಿದೆ ಎಂದಿದೆ.
ಆಹಾರ ಧಾನ್ಯಗಳ ಸಾಕಷ್ಟು ದಾಸ್ತಾನು ಇದೆ ಮತ್ತು ಜಲಾಶಯದಲ್ಲಿನನೀರಿನ ಮಟ್ಟ ತೃಪ್ತಿಕರವಾಗಿದೆ. ಆದರೆ, ಈ ಬಾರಿ ಸಾಮಾನ್ಯಕ್ಕಿಂತ ಮುಂಗಾರು ಮುನ್ಸೂಚನೆ ಕಡಿಮೆ ಇರುವ ಅಂದಾಜು, ಎಲ್ ನಿನೊ ಆಹಾರದ ಬೆಲೆಗಳ ಪರಿಣಾಮ ಬೀರಲಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಏಪ್ರಿಲ್-ಮೇ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸರಾಸರಿ 110 ಡಾಲರ್ನಷ್ಟಿತ್ತು.

