ಕಾಸರಗೋಡು: ಜಿಲ್ಲಾ ಪಂಚಾಯಿತಿಯ ಪುತ್ತಿಗೆ ಡಿವಿಜನ್ಗೆ ಒಳಪಟ್ಟ ಅಂಗಡಿಮೊಗರು ಸರ್ಕಾರಿ ಹಯರ್ ಸೆಕೆಂಡರಿ ಶಾಲೆಗೆ ಸಿಪಿಐಎಂ ಪ್ರಾಯೋಜಕತ್ವದಲ್ಲಿ ದ್ವಾರ ಮತ್ತು ಪಕ್ಷದ ಹೆಸರುಳ್ಳ ಫಲಕ
ಸ್ಥಾಪಿಸಿರುವುದು, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ವ್ಯಾಪಕ ವಾಗ್ವಾದಕ್ಕೆ ಕಾರಣವಾಯಿತು.
ಶೈಕ್ಷಣಿಕ ಸಂಸ್ಥೆಗಳನ್ನು ರಾಜಕೀಯ ಪಕ್ಷದ ಕಮಾನು, ದ್ವಾರ, ಫಲಕ ಅಳವಡಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿರುವುದು ಖಂಡನೀಯ ಎಂದು ಜಿ ಪಂ. ಸದಸ್ಯ ಜೆ. ಎಸ್. ಸೋಮಶೇಖರ್ ಪ್ರಶ್ನಿಸುವುದರೊಂದಿಗೆ ಸಭೆಯಲ್ಲಿ ವಾಗ್ವಾದ ಆರಂಭಗೊಂಡಿತ್ತು. ಇದನ್ನು ಮುಂದಿಟ್ಟುಕೊಂಡು ಐಕ್ಯರಂಗ ಸದಸ್ಯರು ಸಭೆಯಲ್ಲಿ ಪ್ರತಿಭಟಿಸಿ ಗದ್ದಲ ಎಬ್ಬಿಸಿದರು. ವಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಜಿಪಂ ಅಧ್ಯಕ್ಷ ಮೌನವಾಗಿದ್ದು, ಸಭೆಯಲ್ಲಿ ಅರ್ಧ ತಾಸಿಗೂ ಹೆಚ್ಚುಕಾಲ ಗೊಂದಲದ ವತಾವರಣ ಉಂಟಾಯಿತು.
ಕೊನೆಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಮಂಡಿಸುವುದಾಗಿ ಜಿ. ಪಂ. ಅಧ್ಯಕ್ಷರು ಭರವಸೆ ನೀಡಿದರು.
ಜಿ. ಪಂ. ಪುತ್ತಿಗೆ ಡಿವಿಜನ್ ಸದಸ್ಯರಾದ ಜೆ. ಎಸ್. ಸೋಮಶೇಖರ್ ಅವರು ಜೂನ್ 8 ರ ಜಿ. ಪಂ. ಸಭೆಯಲ್ಲಿ ಸರಕಾರಿ ಶಾಲೆಗೆ ಸಿಪಿಐಎಂನ ಫಲಕ ಹೊಂದಿದ ದ್ವಾರ ಸ್ಥಾಪಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸುವ ಮೂಲಕ ಸಭಾ ಕಲಾಪ ಆರಂಭಿಸಿದ್ದರು.
ಸರಕಾರಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಯಾರಿಗೂ ತಿಳಿಯದೇ ದ್ವಾರ ನಿರ್ಮಿಸಿ, ಅದರಲ್ಲಿ ಸಿಪಿಐಎಂ ಪಕ್ಷದ ಹೆಸರು ಅಳವಡಿಸಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಸ್ಥಳೀಯ ವಾರ್ಡು ಸದಸ್ಯರ ಅರಿವಗೂ ಬಾರದೆ, ಸಿಪಿಐಎಂ ಪಕ್ಷದ ಕಾರ್ಯಕ್ರಮವನ್ನಾಗಿ ಶಾಲಾ ದ್ವಾರವನ್ನು ಜಿ. ಪಂ. ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿರುವುದನ್ನು ಜಿ.ಪಂ. ಸದಸ್ಯ ಸೋಮಶೇಖರ್ ಪ್ರಶ್ನಿಸಿದ್ದರು.
ಬಾಡೂರಿನ ಸಿಪಿಎಂ ನೇತಾರ ಕೆ. ಎಸ್. ಅಬ್ದುಲ್ ರಹ್ಮಾನ್ ಸ್ಮರಣಾರ್ಥ ಸಿಪಿಐಎಂ ಬಾಡೂರು ಪ್ರಾದೇಶಿಕ ಘಟಕದ ಕೊಡುಗೆಯಾಗಿ ದ್ವಾರ ಸ್ಥಾಪಿಸಲಾಗಿದೆ.



