ರಾಯಪುರ: ಛತ್ತೀಸಗಢದ ಶಾಲೆಗಳಲ್ಲಿ ಇನ್ನು ಮುಂದೆ ನಿತ್ಯವೂ ರಾಷ್ಟ್ರಗೀತೆ, ಹಾಡುವ ಜೊತೆಗೆ ಗಾಯತ್ರಿ ಮಂತ್ರ ಹಾಗೂ ಹಿಂದೂ ಧರ್ಮದ ಪ್ರಾರ್ಥನೆಗಳ ಪಠಣ ಕಡ್ಡಾಯವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಪಠಣ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ದೇಶಭಕ್ತಿ ಮೈಗೂಡಿಸಿಕೊಳ್ಳುವಂತೆ ಮಾಡುವುದು, ಅವರ ಬೌದ್ಧಿಕ ಬೆಳವಣಿಗೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳು ಕುರಿತು ಅವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿದಿನ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ' ಎಂದೂ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಮಂಗಳವಾರ ಆರಂಭವಾಗಿದೆ. ಜೂನ್ 12ರಂದು ಈ ಕುರಿತು ಆದೇಶ ಹೊರಡಿಸಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. 'ಶಾಲೆಗಳಲ್ಲಿ ಇತರ ಧರ್ಮಗಳ ವಿದ್ಯಾರ್ಥಿಗಳು ಕೂಡ ಓದುತ್ತಿರುವಾಗ, ಹಿಂದೂ ಧರ್ಮದ ಪ್ರಾರ್ಥನೆಗಳು ಮತ್ತು ಗಾಯತ್ರಿ ಮಂತ್ರ ಪಠಣವನ್ನು ಕಡ್ಡಾಯಗೊಳಿಸುವುದು ಎಷ್ಟು ಸರಿ' ಎಂದು ಪ್ರಶ್ನಿಸಿದೆ.
'ಬಿಜೆಪಿ ನೇತೃತ್ವದ ಸರ್ಕಾರವು ಶಾಲೆಗಳಲ್ಲಿ ಆರ್ಎಸ್ಎಸ್ ಕಾರ್ಯಸೂಚಿ ಹೇರುವುದಕ್ಕೆ ಯತ್ನಿಸುತ್ತಿದೆ' ಎಂದಿರುವ ಕಾಂಗ್ರೆಸ್, ಈ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದೆ.

