ನವದೆಹಲಿ (PTI): ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ -2026ಕ್ಕೆ ಸಂಬಂಧಿಸಿ, ದೇಶದ ವಿವಿಧ ಹೈಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಪುರಸ್ಕರಿಸಿದೆ.
ಪ್ರಕರಣಗಳ ವರ್ಗಾವಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಪರವಾಗಿಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಂಕ್ಷಿಪ್ತ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ವಿ. ಮೋಹನ ನೇತೃತ್ವದ ನ್ಯಾಯಪೀಠವು ಹೈಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಗಳಿಗೆ ತಡೆ ನೀಡಿತು. ಪ್ರಕರಣ ಗಳ ವರ್ಗಾವಣೆಗೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಿದೆ.
'ನಾನು ವೈದ್ಯನಾಗಿದ್ದು, ನನ್ನ ಅರ್ಜಿ ಸಮಗ್ರತೆಯಿಂದ ಕೂಡಿದೆ' ಎಂದು ಅರ್ಜಿದಾರರೊಬ್ಬರು ನ್ಯಾಯಾಲಯದ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ನಿಮ್ಮ ಸಹಾಯವೂ ನಮಗೆ ಅಗತ್ಯವಾಗಿ ಬೇಕಿದೆ. ಆದರೆ, ಈ ವಿಷಯಗಳನ್ನು ನಾವೇ ಕೈಗೆತ್ತಿಕೊಳ್ಳಲಿದ್ದೇವೆ. ವಿಭಿನ್ನ ಅಭಿಪ್ರಾಯಗಳಿಗಿಂತ ಒಂದೇ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೇವೆ ಅಥವಾ ಒಂದೇ ಹೈಕೋರ್ಟ್ಗೆ ನೀಡುತ್ತೇವೆ' ಎಂದು ತಿಳಿಸಿ, ನೋಟಿಸ್ ಜಾರಿಗೊಳಿಸಿತು.
ಮಸೂದೆಯಲ್ಲಿ ಸ್ವಯಂ ಗುರುತಿಸಿ ಕೊಳ್ಳುವಿಕೆ ರದ್ದುಗೊಳಿಸಿರುವುದು ಟೀಕೆಗೆ ಕಾರಣವಾಗಿದೆ. 'ವ್ಯಕ್ತಿಯ ಘನತೆ, ಖಾಸಗಿತನ, ದೇಹದ ಮೇಲಿನ ಹಕ್ಕಿನ ಉಲ್ಲಂಘನೆ ಆಗಿದೆ' ಎಂದು ಅರ್ಜಿದಾರರು ದೂರಿದ್ದಾರೆ.

