ಮಂಜೇಶ್ವರ: ಅಪಾಯಕಾರಿ ಸ್ಥಿತಿಯಲ್ಲಿರುವ ಉದ್ಯಾವರ ತೋಟ ಸರ್ಕಾರಿ ಮುಸ್ಲಿಂ ಎಲ್ಪಿ ಶಾಲೆ ಮತ್ತು ಅಂಗನವಾಡಿಯ ಮಕ್ಕಳನ್ನು ಹತ್ತಿರದ ಸುರಕ್ಷಿತ ಕಟ್ಟಡಕ್ಕೆ ಸ್ಥಳಾಂತರಿಸಿ ತರಗತಿ ಚಟುವಟಿಕೆಗಳನ್ನು ಪ್ರಾರಂಭಿಸಲು ಶಾಲೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅಸುರಕ್ಷಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆ ಬಗ್ಗೆ ದೂರಿನ ಮೇರೆಗೆ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದರು. ನಂತರ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ಹತ್ತಿರದ ಮಸೀದಿ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.
ಅಪಾಯಕಾರಿ ಕಟ್ಟಡದಲ್ಲಿ ಇಲ್ಲಿಯವರೆಗೆ ಶಾಲೆ ಮತ್ತು ಅಂಗನವಾಡಿಗಳ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆಗೆ ಸೂಚಿಸಿದರು. ಹೊಸ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಂಜೇಶ್ವರ ಗ್ರಾಮ ಪಂಚಾಯತಿ, ಶಾಲಾ ಶಿಕ್ಷಕ-ರಕ್ಷಕ ಸಮಿತಿ ಮತ್ತು ಶಿಕ್ಷಣ ಇಲಾಖೆ ಜಂಟಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಯು.ಕೆ ಸೈಪುಲ್ಲಾ ತಂಙಳ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ ಅಬ್ದುಲ್ ರಹಮಾನ್, ಗ್ರಾಮ ಪಂಚಾಯತಿ ಸದಸ್ಯರು, ಡಿಡಿ ಇ ಪ್ರಭಾರಿ ಪಿ ಸವಿತಾ, ಮಂಜೇಶ್ವರ ಎಇಓ ಡಿ. ನಾರಾಯಣ, ಶಾಲಾ ಮುಖ್ಯೋಪಾಧ್ಯಾಯ ಎಂ. ಇಸ್ಮಾಯಿಲ್, ಮಂಜೇಶ್ವರ ತಹಶೀಲ್ದಾರ್ ಪಿ ಪ್ರೇಮ್ ರಾಜ್, ಮಂಜೇಶ್ವರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶಾನವಾಸ್, ಸಹಾಯಕ ಇಂಜಿನಿಯರ್ ಅಕ್ಷರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯೊಂದಿಗೆ ಉಪಸ್ಥಿತರಿದ್ದರು.

.jpg)
.jpg)
