ಮುಂಬೈ: ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು ನಿಯಮಗಳಿಗೆ ಅಕ್ರಮವಾಗಿ ಮಾಡಿರುವ ಐದು ತಿದ್ದುಪಡಿಗಳನ್ನು ಹಿಂಪಡೆಯದಿದ್ದರೆ, ಜುಲೈ 5ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದು ಮಂಗಳವಾರ ಹಿರಿಯ ಹೋರಾಟಗಾರ ಅಣ್ಣಾ ಹಝಾರೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಅಣ್ಣಾ ಹಝಾರೆ, "ಜೂನ್ 12ರಂದು ಮಾಡಲಾಗಿರುವ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯ್ದೆಯ ಆಶಯಗಳನ್ನು ಉಲ್ಲಂಘಿಸುತ್ತದೆ ಹಾಗೂ ಪಾರದರ್ಶಕತೆಯನ್ನು ಇಲ್ಲವಾಗಿಸುತ್ತದೆ" ಎಂದು ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರ ಮಾಹಿತಿ ಹಕ್ಕು ನಿಯಮಗಳಿಗೆ ಮಾಡಲಾಗಿರುವ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯ್ದೆಯ ತೀಕ್ಷ್ಣತೆಯನ್ನು ಮೊಂಡುಗೊಳಿಸುತ್ತದೆ ಹಾಗೂ ಜನರನ್ನು ಮಾಹಿತಿಗಳಿಂದ ದೂರ ಇಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಹಕ್ಕು ಅರ್ಜಿಯನ್ನು ಸಲ್ಲಿಸಲು ಏರಿಕೆ ಮಾಡಲಾಗಿರುವ ಶುಲ್ಕವನ್ನೂ ಆಕ್ಷೇಪಿಸಿರುವ ಅಣ್ಣಾ ಹಝಾರೆ, ಈ ಏರಿಕೆಗೆ ಯಾವುದೇ ತಾರ್ಕಿಕ ಸಮರ್ಥನೆಯಾಗಲಿ ಅಥವಾ ಆರ್ಥಿಕ ವಿಶ್ಲೇಷಣೆಯನ್ನಾಗಲಿ ಒದಗಿಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಮಾಹಿತಿ ಹಕ್ಕು ಕಾಯ್ದೆ ಆದಾಯವನ್ನು ಸೃಷ್ಟಿಸುವ ಕಾನೂನಲ್ಲ. 20 ವರ್ಷಗಳ ಬಳಿಕ ಮಾಹಿತಿ ಹಕ್ಕು ಅರ್ಜಿಯ ಶುಲ್ಕವನ್ನು ಏರಿಕೆ ಮಾಡಿರುವುದಾದರೆ, ಮಾಹಿತಿ ನಿರಾಕರಿಸುವ ಅಧಿಕಾರಿಗಳ ಮೇಲಿನ ದಂಡವನ್ನೇಕೆ ಹೆಚ್ಚಳ ಮಾಡಬಾರದು?" ಎಂದೂ ಅವರು ಪ್ರಶ್ನಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿರುವ ಅಣ್ಣಾ ಹಝಾರೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 6(2)ರ ಅನ್ವಯ ಅರ್ಜಿದಾರರು ಮಾಹಿತಿಯನ್ನು ಪಡೆಯಲು ತಮ್ಮ ವೈಯಕ್ತಿಕ ವಿವರಗಳನ್ನಾಗಲಿ ಅಥವಾ ಕಾರಣಗಳನ್ನಾಗಲಿ ಬಹಿರಂಗಗೊಳಿಸಬೇಕಾದ ಅಗತ್ಯವಿಲ್ಲ. ಇಂತಹ ಷರತ್ತುಗಳು ವಿಷಲ್ ಬ್ಲೋಯರ್ ಗಳು ಹಾಗೂ ಹೋರಾಟಗಾರರಿಗೆ ಅಪಾಯವನ್ನು ತಂದೊಡ್ಡುತ್ತವೆ" ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ತಿದ್ದುಪಡಿ ನಿಯಮಗಳನ್ನು ಹಿಂಪಡೆಯಬೇಕು ಹಾಗೂ ಅರ್ಜಿದಾರರ ಮೇಲೆ ಹೊಸ ನಿರ್ಬಂಧಗಳನ್ನು ಹೇರುವ ಬದಲು ಸಕ್ರಿಯ ಮಾಹಿತಿ ಬಹಿರಂಗ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

