ಲಕ್ನೋ: ಯೂಟ್ಯೂಬ್ ನಲ್ಲಿ ಧಾರ್ಮಿಕ ಪ್ರವಚನಗಳನ್ನು ನೀಡಿ ಅನುಯಾಯಿಗಳನ್ನು ಸೆಳೆದು, ಯುವತಿಯರನ್ನು ಲೈಂಗಿಕವಾಗಿ ಶೋಷಿಸಿದ ಹಾಗೂ ಅವರ ಖಾಸಗಿ ಛಾಯಾಚಿತ್ರ ಮತ್ತು ವೀಡಿಯೊಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ 29 ವರ್ಷದ ಐಐಟಿ ಪದವೀಧರನನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಒಡಿಶಾದ ಅಭಿಷೇಕ್ ಮಿಶ್ರಾ ಎಂಬಾತನೇ ಬಂಧಿತ ಆರೋಪಿ. ಆತ 'ಆದಿಕರ್ತ ನಾರಾಯಣ್ ದಾಸ್' ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಗುರು ಹಾಗೂ ಕಥಾವಾಚಕನಾಗಿ ಗುರುತಿಸಿಕೊಂಡಿದ್ದ. 2017ರಿಂದ 2021ರವರೆಗೆ ಐಐಟಿ ರೂರ್ಕಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಆತ, ಕಳೆದ ನಾಲ್ಕು ವರ್ಷಗಳಿಂದ ಮಥುರಾದ ರಾಧಾಕುಂಜ್ ಪ್ರದೇಶದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ ಗಢದ ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಅಭಿಷೇಕ್ ಮಿಶ್ರಾ 'ರಾಧಾ ಕೃಪಾ ಅಮೃತ' ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಈ ಚಾನೆಲ್ ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಧಾರ್ಮಿಕ ಪ್ರವಚನಗಳನ್ನು ನೀಡುತ್ತಿದ್ದ. ತನ್ನ ಕಲ್ಪಿತ ಹೆಸರಿನಲ್ಲೇ ಲಿಂಕ್ಡ್ಇನ್ ಪ್ರೊಫೈಲ್ ನಿರ್ವಹಿಸುತ್ತಿದ್ದ.
ಈ ಆನ್ಲೈನ್ ವೇದಿಕೆಗಳ ಮೂಲಕ ಅನುಯಾಯಿಗಳ ಜಾಲ ನಿರ್ಮಿಸಿಕೊಂಡಿದ್ದ ಆತ, ವಿಶೇಷವಾಗಿ ಇಂಜಿನಿಯರಿಂಗ್ ಹಿನ್ನೆಲೆಯ ಯುವತಿಯರನ್ನು ಗುರುತಿಸಿ ಅವರೊಂದಿಗೆ ಸಂಪರ್ಕ ಬೆಳೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರೊಂದಿಗೆ ಆಪ್ತತೆ ಬೆಳೆಸಿದ ಬಳಿಕ, ಅವರನ್ನು ಕುಟುಂಬಗಳಿಂದ ದೂರವಾಗುವಂತೆ ಪ್ರೇರೇಪಿಸಿ ಮಥುರಾದಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಒಂದು ಹಂತದಲ್ಲಿ ಆತನ ನಿವಾಸದಲ್ಲಿ ಸುಮಾರು 24 ಯುವಕ-ಯುವತಿಯರು ವಾಸಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ತನ್ನ ಪ್ರಭಾವಕ್ಕೆ ಒಳಗಾದ ಮಹಿಳೆಯರಿಗೆ ಗಂಧರ್ವ ವಿವಾಹದ ಹೆಸರಿನಲ್ಲಿ ಸಂಬಂಧ ಬೆಳೆಸುತ್ತಿದ್ದ ಆತ, ಅದನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.
ಇದಲ್ಲದೆ, 'ಪ್ರಸಾದ'ದ ಹೆಸರಿನಲ್ಲಿ ಮಾದಕ ದ್ರವ್ಯ ಬೆರೆಸಿದ ಹಾಲು ನೀಡಿದ ಬಳಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಕೃತ್ಯಗಳ ಛಾಯಾಚಿತ್ರ ಹಾಗೂ ವೀಡಿಯೊಗಳನ್ನು ದಾಖಲಿಸಿಕೊಂಡು, ಬಳಿಕ ಅವುಗಳನ್ನು ಬಳಸಿ ಮಹಿಳೆಯರು ಮತ್ತು ಅವರ ಕುಟುಂಬಗಳನ್ನು ಬೆದರಿಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಆತನ ಮೊಬೈಲ್ ಫೋನ್ನಿಂದ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ತನ್ನೊಂದಿಗೆ ವಾಸಿಸುತ್ತಿದ್ದವರ ಕುಟುಂಬಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಇತರ ಯುವತಿಯರನ್ನು ತನ್ನ ಪ್ರಭಾವಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಯುವತಿಯೊಬ್ಬಳ ಕುಟುಂಬ ಸದಸ್ಯರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ, ಅಭಿಷೇಕ್ ಮಿಶ್ರಾ ಮತ್ತು ಆತನ ಸಹಚರರು ಗದ್ದಲ ಸೃಷ್ಟಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಆತನೊಂದಿಗೆ ವಾಸಿಸುತ್ತಿದ್ದ ತಾಯಿ, ಮಗನ ವರ್ತನೆಯಿಂದ ಬೇಸತ್ತು ಬಳಿಕ ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ. ಮೊದಲಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆತ, ನಂತರ ಸ್ವಂತ ಮನೆ ನಿರ್ಮಿಸಿಕೊಂಡಿದ್ದ.
ಆತನೊಂದಿಗೆ ವಾಸಿಸುತ್ತಿದ್ದ ಹಲವರು ಕಾಲಕ್ರಮೇಣ ಆತನ ನಡವಳಿಕೆಯ ಬಗ್ಗೆ ಅನುಮಾನಗೊಂಡು ಅಲ್ಲಿಂದ ಹೊರಟುಹೋಗಿದ್ದಾರೆ. ಆರಂಭದಲ್ಲಿ ಅವರನ್ನು ಮಾನಸಿಕವಾಗಿ ಪ್ರಭಾವಿತಗೊಳಿಸಿ ತನ್ನ ಬಗ್ಗೆ ನಿಷ್ಠರಾಗಿರುವಂತೆ ಮಾಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

