ಭುವನೇಶ್ವರ: ಪುರಿ ಜಗನ್ನಾಥ ರಥಯಾತ್ರೆ ವೇಳೆ ಭಾರಿ ಜನಸಂದಣಿಯಲ್ಲಿ ಸಿಲುಕಿದ್ದ 33 ಭಕ್ತರನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಿಳಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಒಡಿಶಾ ಪೊಲೀಸರು, 'ಭಕ್ತರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಪ್ರಥಮ ಚಿಕಿತ್ಸೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.
'ಬೃಹತ್ ಜನಸಂದಣಿಯ ನಡುವೆ ಪ್ರಜ್ಞೆ ತಪ್ಪಿದಂತೆ ಕಂಡುಬಂದ ಭಕ್ತರನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭಕ್ತರ ಸುರಕ್ಷತೆ ಮತ್ತು ರಥಯಾತ್ರೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
ಪುರಿ ಜಗನ್ನಾಥ ರಥಯಾತ್ರೆಯು ಇಂದು (ಜುಲೈ 16) ಅತ್ಯಂತ ವೈಭವದಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ಜಗನ್ನಾಥನ ಘೋಷಗಳೊಂದಿಗೆ ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜುಲೈ 16ರಿಂದ 24ರವರೆಗೆ ನಡೆಯಲಿರುವ ರಥಯಾತ್ರೆಗೆ ಅತ್ಯಂತ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಈ ಯಾತ್ರೆಗೆ ಚಾಲನೆ ನೀಡಲಾಗುತ್ತದೆ.

