ನಾಗರಕೊಯಿಲ್ : ಇಲ್ಲಿನ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬರು ಮೃತಪಟ್ಟಿದ್ದು, ಈ ಸಂಬಂಧ ಜೈಲಿನ ಮುಖ್ಯ ವಾರ್ಡನ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಂಟು ಸಹ ಕೈದಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
ಎಸ್.ಶಬರಿ ವರ್ಮನ್ (35) ಎಂಬ ಅಂಗವಿಕಲ ಯುವಕ ನಾಗರಕೊಯಿಲ್ ಎತ್ತಂಕಾಡುವಿನಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ನಿಷೇಧಿತ ಗುಟ್ಕಾ ಮಾರಾಟ ಮಾಡುತ್ತಿದ್ದ ಎಂಬ ಆರೋಪದಡಿ ಜುಲೈ9ರಂದು ಅವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
'ಸೆಲ್ನಲ್ಲಿ ಜೋರಾಗಿ ಶಬ್ದ ಮಾಡಿದರು ಎಂಬ ಕಾರಣಕ್ಕೆ ಶಬರಿ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. ಮಧ್ಯಪ್ರವೇಶಿಸಿದ ಜೈಲು ಸಿಬ್ಬಂದಿಯೂ ಥಳಿಸಿದ್ದಾರೆ. ಈ ಘಟನೆ ಜುಲೈ 13ರ ಮಧ್ಯರಾತ್ರಿ ನಡೆದಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಜುಲೈ 13ರಂದು ಶಬರಿ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಇವರ ದೇಹದಲ್ಲಿ 19 ಕಡೆ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಬಳಿಕ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಮೂವರು ಸಿಬ್ಬಂದಿಯನ್ನು ಬಂಧಿಸಲಾಯಿತು. ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮೃತದೇಹವನ್ನು ಪಡೆಯಲು ಶಬರಿ ಅವರ ಕುಟುಂಬ ಸದಸ್ಯರು ನಿರಾಕರಿಸಿದರು. ಮೃತದೇಹವನ್ನು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಪ್ರಕರಣದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಆಸರಿಪಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಂದೆ ಬುಧವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಎಂಕೆ ಸಂಸದೆ ಕನಿಮೋಳಿ ಅವರು, ಶಬರಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸಾಂತ್ವನ ಹೇಳಿದರು.
ಘಟನೆ ಕುರಿತು ವಿಪಕ್ಷಗಳು ಸರ್ಕಾರವನ್ನು ಟೀಕಿಸಿವೆ. 'ಈ ಕಸ್ಟಡಿ ಸಾವು ಸಂಭವಿಸಿ ಮೂರು ದಿನಗಳು ಕಳೆದರೂ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಘಟನೆ ಬಗ್ಗೆ ಮಾತನಾಡಿಲ್ಲ. ಯಾವುದೇ ಸಚಿವರೂ ಶಬರಿ ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ. ಅವರಿಗೆ ಪರಿಹಾರ ನೀಡಲೂ ಸರ್ಕಾರ ಮುಂದೆ ಬಂದಿಲ್ಲ' ಎಂದು 'ಎಕ್ಸ್'ನಲ್ಲಿ ಕನಿಮೋಳಿ ಪೋಸ್ಟ್ ಮಾಡಿದ್ದಾರೆ.
ಇದೊಂದು ಭಯಾನಕ ಘಟನೆ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು, 'ಡಿಎಂಕೆ ಆಡಳಿತದ ಅವಧಿಯಲ್ಲಿ ನಡೆದ ಕಸ್ಟಡಿ ಹತ್ಯೆಗಳು ಮುಂದುವರಿಯುವಂತೆ ಕಾಣುತ್ತಿದೆ' ಎಂದಿದ್ದಾರೆ.

