ಕಾಸರಗೋಡು: ರಾಜ್ಯದಲ್ಲಿ ಐಕ್ಯರಂಗ ಅಧಿಕಾರಕ್ಕೇರಿ ತಿಂಗಳುಗಳು ಕಳೆದರೂ, ಆಡಳಿತಯಂತ್ರ ಇನ್ನೂ ಚುರುಕುಗೊಳ್ಳದಿರುವುದು ಸರ್ಕಾರದ ನಿಷ್ಕ್ರಿಯತೆಗೆ ನಿದರ್ಶನವಾಗಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ. ಅವರು ಬಿಜೆಪಿ ವೆಳ್ಳರಿಕುಂಡು ಸಾಂಸ್ಥಿಕ ಮಂಡಲದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಸಿಎಂ ಹುದ್ದೆ ಬದಲಾಗಿರುವುದು ಬಿಟ್ಟರೆ, ಉಭಯ ರಂಗಗಳ ಆಡಳಿತ ಶೈಲಿ ಒಂದೇ ಆಗಿ ಮುಂದುವರಿಯುತ್ತಿದೆ.
ಕೇರಳವನ್ನು ನಡುಗಿಸಿರುವ ವಯನಾಡ್ ಭೂಕುಸಿತ ದುರಂತದಲ್ಲಿ ಹಲವರು ಪ್ರಾಣಕಳೆದುಕೊಂಡಿದ್ದರೂ, ಅಲ್ಲಿನ ಸಂಸದೆಯಾಗಲಿ, ಲೋಕಸಭೆ ಪ್ರತಿಪಕ್ಷ ಮುಖಂಡ ಹಾಗೂ ವಯನಾಡಿನ ಮಾಜಿ ಸಂಸದ ರಾಹುಲ್ಗಾಂಧಿ ಇತ್ತ ಮುಖ ಮಾಡದಿರುವುದು ಕ್ಷೇತ್ರ ಹಾಗೂ ಕೇರಳದ ಜನತೆಗೆ ಎಸಗಿರುವ ವಂಚನೆಯಾಗಿದೆ. ಕೇರಳದಲ್ಲಿ ಮೂರು ವಿಧಾನಸಭಾ ಕ್ಷೇತ್ರ ಹಾಗೂ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು, ಐಕ್ಯರಂಗ ಹಾಗೂ ಎಡರಂಗದ ನಿದ್ದೆಗೆಡಿಸಿದೆ. ಈ ಗೆಲುವು ಬಿಜೆಪಿ ಕಾರ್ಯಕರ್ತರ ಮೇಲಿನ ಜವಾಬ್ದಾರಿ ಹೆಚ್ಚಿಸಿರುವುದಾಗಿ ತಿಳಿಸಿದರು.
ಮಂಡಲ ಅಧ್ಯಕ್ಷರಾದ ವಿನೀತ್ ಕುಮಾರ್ ಮುಂಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಕೋಯಿಕ್ಕೋಡ್ ವಲಯ ಸಂಘಟನಾ ಕಾರ್ಯದರ್ಶಿ ಜಿ. ಕಾಶಿನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷ ಎಂ. ಬಲರಾಜ್, ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಕೃಷಿಕ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿ. ಕುಞÂಕಣ್ಣನ್, ಜಿಲ್ಲಾ ಅಧ್ಯಕ್ಷ ಸುಕುಮಾರನ್ ಕಾಲಿಕಡವ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೆ.ಕೆ. ವೇಣುಗೋಪಾಲ್ ಹಾಗೂ ಶ್ರೀಜಿತ್ ಪರಕ್ಲಾಯಿ ಉಪಸ್ಥಿತರಿದ್ದರು.



