ಪೆರ್ಲ: ಬೆದ್ರಂಪಳ್ಳದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಮೂಲತ: ಪತ್ತನಂತಿಟ್ಟ ನಿವಾಸಿ, ಪ್ರಕಾಶನ್-ಸುನೀತ ದಂಪತಿ ಪುತ್ರ ಏಳನೇ ತರಗತಿ ವಿದ್ಯಾರ್ಥಿ ಶ್ರೀ ಹರಿ(13)ಮೃತದೇಹ ಊರಿಗೆ ಸಾಗಿಸುವಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿi ಆಡಳಿತ ಮತ್ತು ಸಂಘಟನೆಗಳು ಕೈಜೋಡಿಸಿದೆ. ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ ಸೇರಿದಂತೆ ಜನಪ್ರತಿನಿಧಿಗಳು ಬಾಲಕನ ಮೃತದೇಹ ಶವಮಹಜರಿಗಾಗಿ ಆಸ್ಪತ್ರೆಗೆ ಕೊಂಡೊಯ್ಯುವುದರಿಂದ ತೊಡಗಿ ಸಂಪೂರ್ಣ ಸಹಕಾರ ನೀಡಿದರೆ, ಮೃತದೇಹವನ್ನು ಬಾಲಕನ ಹುಟ್ಟೂರು ಪತ್ತನಂತಿಟ್ಟದ ಅಡೂರಿಗೆ ಕೊಂಡೊಯ್ಯುವ ಸಂಪೂರ್ಣ ವೆಚ್ಚವನ್ನು ಪಂಚಾಯಿತಿ ಯೂತ್ ಲೀಗ್ ಸಮಿತಿ ವಹಿಸಿಕೊಂಡಿತ್ತು. ಭಾನುವಾರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ರಾತ್ರಿ ಪತ್ತನಂತಿಟ್ಟಕ್ಕೆ ಆಂಬುಲೆನ್ಸ್ ಮೂಲಕ ಮೃತದೇಹ ಕೊಂಡೊಯ್ಯಲಾಗಿದೆ.
ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಪ್ರಕಾಶ್ ಅವರ ಕುಟುಂಬ ಬಡತನದಿಂದ ಜೀವನ ಸಾಗಿಸುತ್ತಿದ್ದು, ಕೆಲಸ ಅರಸಿಕೊಂಡು ಎಣ್ಮಕಜೆ ಪಂಚಾಯಿತಿಯ ಬೆದ್ರಂಪಳ್ಳಕ್ಕೆ ಆಗಮಿಸಿತ್ತು. ಮೂವರು ಮಕ್ಕಳಲ್ಲಿ ಹಿರಿಯವನಾದ ಶ್ರೀ ಹರಿ ಬಣ್ಣತ್ತಡ್ಕ ಎ.ಯು.ಪಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದನು. ಶಾಲಾ ಶಾಲಾಧ್ಯಾಪಕರು, ಊರ ನಾಗರಿಕರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಅಗಲಿದ ಬಾಲಕನಿಗೆ ಅಂತಿಮ ವಿದಾಯ ಹೇಳಿದರು.

