ಪೆರ್ಲ: ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಕೂಡಿದ ತರಬೇತಿಯಿಂದ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯ ಎಂಬುದಾಗಿ ಕೇರಳ ರಾಜ್ಯ ಮಾಜಿ ಕಬಡ್ಡಿ ಕಪ್ತಾನ ಗಣೇಶ್ ಕುಂಬಳೆ ತಿಳಿಸಿದ್ದಾರೆ.
ಅವರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಸ್ಥಾನದ ಸಭಾಂಗಣದಲ್ಲಿ ಸಮಾಜ ಬಾಂಧವರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟನೆ ನಡೆಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಪಾಲನೆಯೊಂದಿಗೆ ಹೆತ್ತವರು, ಪೋಷಕರ ಪರಿಪಾಲನೆಗೆ ಯುವಸಮೂಹ ಮುಂದಾಗಬೇಕು ಎಂದುತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಅಧ್ಯಕ್ಷ ಬಿ.ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಮುಖಂಡ, ರಾಮ್ಕುಮಾರ್ ಮುಂಡಿತತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಮಾಜವನ್ನು ಅಸ್ಥಿರಗೊಳಿಸುತ್ತಿರುವ ಮಾದಕವಸ್ತುಗಳ ಬಳಕೆ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ತಿಳಿಸಿದರು. ಬಿಲ್ಲವ ಸೇವಾ ಸಂಘ ಮಹಿಳಾ ಘಟಕ ಅಧ್ಯಕ್ಷ ರುಕ್ಮಿಣಿ ಸುವರ್ಣ, ಕ್ರೀಡಾ ಸಮಿತಿ ಸಂಚಾಲಕ ರಾಮಣ್ಣ ಬಾಂಕಾನ, ರಾಮಣ್ಣ ಬಿ.ಸಿ ಉಪಸ್ಥಿತರಿದ್ದರು.
ಘಟಕ ಕೋಶಾಧಿಕಾರಿ ಪದ್ಮನಾಭ ಸುವರ್ಣ ಸ್ವಾಗತಿಸಿದರು. ಪುರುಷೋತ್ತಮ ಬಿ.ಎಂ ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ಕಾನ ವಂದಿಸಿದರು. ಎಲ್ಪಿ. ಯುಪಿ.ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸಮಾಜಬಾಂಧವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಆ. 30ರಂದು ಬೆಳಗಗೆ 8.30ಕ್ಕೆ ಪೆರ್ಲ ವ್ಯಾಪಾರಿ ಭವನ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು.



